ಕಾರವಾರ: ‘ಈ ಬಾರಿ ಅದ್ಧೂರಿಯಾಗಿ ಕರಾವಳಿ ಉತ್ಸವ ಮಾಡುವುದು ಬೇಡ ಎಂದು ನನ್ನ ಅನಿಸಿಕೆ. ಸರಳವಾಗಿ ಹೇಗೆ ಆಯೋಜಿಸಬಹುದು ಎಂಬ ಬಗ್ಗೆ ಚಿಂತನೆ ನಡೆಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಬಾರಿ ಜಿಲ್ಲೆಯಲ್ಲಿ ನೆರೆಯಿಂದ ನೂರಾರು ಜನರು ದುಃಖದಲ್ಲಿದ್ದಾರೆ. ಅವರಿಗೆ ಸೂಕ್ತ ರೀತಿಯಲ್ಲಿ ಬದುಕನ್ನು ಪುನಃ ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡುವುದು ಈಗಿನ ಆದ್ಯತೆಯಾಗಿದೆ. ಅನಗತ್ಯ ಖರ್ಚು ಬೇಡ’ ಎಂದು ಅಭಿಪ್ರಾಯಪಟ್ಟರು.
‘ಅಂಗನವಾಡಿ ಕಾರ್ಯಕರ್ತೆಯರಿಗೆ ಮೊದಲು ತಿಂಗಳಿಗೆ₹ 8 ಸಾವಿರ ಗೌರವ ಧನ ಕೊಡುತ್ತಿದ್ದರೂ ಕಾಲಕಾಲಕ್ಕೆ ಪಾವತಿಯಾಗುತ್ತಿರಲಿಲ್ಲ. ಒಂದು ವರ್ಷದಿಂದ ಬಾಕಿಯಿದ್ದ ಗೌರವಧನವನ್ನು ಪಾವತಿಸಲು ಕ್ರಮ ಕೈಗೊಳ್ಳಲಾಗಿದೆ. ಪ್ರತಿ ತಿಂಗಳು ಐದನೇ ತಾರೀಕಿನ ಮೊದಲು ಪಾವತಿಗೆ ಸೂಚಿಸಲಾಗಿದೆ’ ಎಂದರು.
ರಸ್ತೆ ದುರಸ್ತಿಗೆ ಹಣ:ಜಿಲ್ಲೆಯ ರಸ್ತೆಗಳು ತುಂಬ ಹದಗೆಟ್ಟಿವೆ ಎಂದು ಪತ್ರಕರ್ತರು ಗಮನ ಸೆಳೆದಾಗ, ‘ರಸ್ತೆಗಳ ತಾತ್ಕಾಲಿಕ ದುರಸ್ತಿಗೆ ಅನುದಾನ ಬಿಡುಗಡೆ ಮಾಡಲು ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ಸಮ್ಮತಿಸಿದ್ದಾರೆ. ಆಗ ಈ ಜಿಲ್ಲೆಗೂ ಹಣ ಸಿಗಬಹುದು’ ಎಂದು ಪ್ರತಿಕ್ರಿಯಿಸಿದರು.