ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ಉಪೇಂದ್ರ ಪೈ, ಪ್ರಮುಖರಾದ ಎಂ.ಎಂ.ಭಟ್ಟ, ಶ್ರೀನಿವಾಸ ಹೆಬ್ಬಾರ ಅವರು, ರಸ್ತೆ ಉನ್ನತೀಕರಣ ಕಾಮಗಾರಿ ತಕ್ಷಣ ಪ್ರಾರಂಭಿಸುವಂತೆ ಒತ್ತಾಯಿಸಿದರು. ಉತ್ತರ ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿ ಪ್ರದೇಶ (ಕೊಲ್ಲಾಪುರ, ಸಾಂಗ್ಲಿ)ದಿಂದ ದಕ್ಷಿಣ ಕನ್ನಡದ ಕೊಲ್ಲೂರು, ಧರ್ಮಸ್ಥಳ, ಸುಬ್ರಹ್ಮಣ್ಯ ಮೊದಲಾದ ಯಾತ್ರಾ ಸ್ಥಳಗಳಿಗೆ ಹೋಗುವ ಸಾವಿರಾರು ಯಾತ್ರಾರ್ಥಿಗಳಿಗೆ ಈ ರಸ್ತೆ ಅನುಕೂಲವಾಗಲಿದೆ. ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು, ಮಣಿಪಾಲಕಕ್ಕೆ ಹೋಗುವ ರೋಗಿಗಳಿಗೆ ರಸ್ತೆ ಸಂಚಾರ ಸುಲಭವಾಗಲಿದೆ. ಕಾರವಾರ, ಬೇಲೆಕೇರಿ ಬಂದರಿನ ಜೊತೆ ನೇರ ಸಂಪರ್ಕ ಸಾಧ್ಯವಾಗುವುದರಿಂದ ರಫ್ತು, ಆಮದಿಗೆ ಹೆಚ್ಚು ಸಹಾಯವಾಗುತ್ತದೆ ಎಂದು ಹೇಳಿದರು.