ಶಿರಸಿ: ರಾಜ್ಯ ಪ್ರಸಿದ್ಧ ಇಲ್ಲಿನ ಮಾರಿಕಾಂಬಾ ದೇವಾಲಯದಲ್ಲಿ ಸೋಮವಾರ ಬೆಳಿಗ್ಗೆಯಿಂದ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಕೋವಿಡ್ 19 ನಿಯಂತ್ರಿಸಲು ಲಾಕ್ ಡೌನ್ ಘೋಷಿಸಿದ ಕಾರಣಕ್ಕೆ ಎರಡೂವರೆ ತಿಂಗಳುಗಳ ಹಿಂದೆ ಮುಚ್ಚಿದ ದೇವಾಲಯದ ಬಾಗಿಲನ್ನು ಇಂದು ತೆರೆಯಲಾಗಿದೆ.
ಬೆಳಿಗ್ಗೆ 8ರಿಂದ ದೇವಿ ದರ್ಶನಕ್ಕೆ ಸಮಯ ನಿಗದಿ ಮಾಡಲಾಗಿತ್ತು. ಆದರೆ, 7.30ರಿಂದಲೇ ನೂರಕ್ಕೂ ಹೆಚ್ಚು ಭಕ್ತರು ಸರದಿ ಸಾಲಿನಲ್ಲಿ ನಿಂತಿದ್ದರು.
ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ಮಾರ್ಕಿಂಗ್ ಮಾಡಲಾಗಿದೆ. ಒಳ ಪ್ರವೇಶಿಸುವ ಭಕ್ತರು ಥರ್ಮಲ್ ಸ್ಕ್ರೀನಿಂಗ್ಗೆ ಒಳಪಡಬೇಕು, ಕೈಗೆ ಸ್ಯಾನಿಟೈಸರ್ ಹಾಕಿಕೊಳ್ಳಬೇಕು ಮತ್ತು ಸ್ವ ವಿವರಗಳನ್ನು ದೇವಾಲಯದ ಸಿಬ್ಬಂದಿಗೆ ನೀಡಬೇಕು.
ಮಾರ್ಚ್ 3ರಿಂದ 11ರವರೆಗೆ ದ್ವೈವಾರ್ಷಿಕ ಮಾರಿಕಾಂಬಾ ಜಾತ್ರೆ ನಡೆದಿತ್ತು. ಸಂಪ್ರದಾಯದಂತೆ ಜಾತ್ರಾ ಪೀಠದಲ್ಲಿ ದೇವ ವಿಸರ್ಜನೆ ನಡೆದ ಮೇಲೆ ಯುಗಾದಿಯಂದು ಪುನರ್ ಪ್ರತಿಷ್ಠಾಪನೆ ನಡೆಯುತ್ತದೆ. ಅಷ್ಟೊತ್ತಿಗೆ ಕೊರೊನಾ ಸೋಂಕಿನ ಭಯ ವ್ಯಾಪಿಸಿದ್ದ ಕಾರಣ ದೇವಾಲಯದ ಪ್ರಮುಖರ ಉಪಸ್ಥಿತಿಯಲ್ಲಿ ಪುನರ್ ಪ್ರತಿಷ್ಠಾ ಕಾರ್ಯ ನಡೆದಿತ್ತು.
ಮೂರು ತಿಂಗಳುಗಳ ನಂತರ ಈಗ ಭಕ್ತರಿಗೆ ದೇವಾಲಯದಲ್ಲಿ ದೇವಿಯ ದರ್ಶನ ಭಾಗ್ಯ ದೊರೆತಿದೆ.