ಶಿರಸಿ: ಹೆರಿಗೆ ನೋವಿನಿಂದ ಬಳಲುತ್ತಿದ್ದ ಸಂತೊಳ್ಳಿ ಗ್ರಾಮದ ಚೈತ್ರಾ ಕಾಶಂಬಿ ಅವರನ್ನು ಬುಧವಾರ ಆಸ್ಪತ್ರೆಗೆ ಕರೆತರುವ ವೇಳೆ ಮಾರ್ಗಮಧ್ಯದಲ್ಲಿಯೇ ಅವರು ಆರೋಗ್ಯ ಕವಚ ಆಂಬುಲೆನ್ಸ್ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದರು.
ಸಂತೊಳ್ಳಿಯಿಂದ ಗರ್ಭಿಣಿಯನ್ನು ಇಲ್ಲಿನ ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ಕರೆತರಲಾಗುತ್ತಿತ್ತು. ಬುಗಡಿಕೊಪ್ಪ ಕ್ರಾಸ್ ಬಳಿ ನೋವು ತೀವ್ರಗೊಂಡ ಹಿನ್ನೆಲೆಯಲ್ಲಿ ತುರ್ತು ವೈದ್ಯಕೀಯ ತಂತ್ರಜ್ಞ ಯೋಗೇಶ ಕರಿಯಣ್ಣನವರ ಮಹಿಳೆಗೆ ವೈದ್ಯಕೀಯ ಉಪಚಾರ ನೀಡಿ ಸುರಕ್ಷಿತ ಹೆರಿಗೆ ಮಾಡಿಸಿದರು. ಬಳಿಕ ಆಸ್ಪತ್ರೆಗೆ ಕರೆತಂದು ದಾಖಲಿಸಲಾಯಿತು.
‘ಆಸ್ಪತ್ರೆಗೆ ಕರೆತರುವವರೆಗೆ ಮಹಿಳೆ ನೋವು ನಿಯಂತ್ರಿಸಿಕೊಳ್ಳುವುದು ಸಾಧ್ಯವಿರಲಿಲ್ಲ. ಹೀಗಾಗಿ ಮಾರ್ಗಮಧ್ಯೆಯೇ ಹೆರಿಗೆ ಮಾಡಿಸಲಾಯಿತು. ತಾಯಿ, ಮಗು ಸುರಕ್ಷಿತವಾಗಿದ್ದಾರೆ’ ಎಂದು ಯೋಗೇಶ ಹೇಳಿದರು. ಆಂಬುಲೆನ್ಸ್ ಚಾಲಕ ನಾಗರಾಜ, ಸಂತೊಳ್ಳಿ ಭಾಗದ ಆಶಾ ಕಾರ್ಯಕರ್ತೆ ಸಹಕರಿಸಿದ್ದರು.