ಶಿರಸಿ: ಲಾಕ್ಡೌನ್ ಕಾರಣ ಜನರು ಸಂಕಷ್ಟದಲ್ಲಿದ್ದರೆ, ತಾಲ್ಲೂಕಿನ ಹೆಗಡೆಕಟ್ಟಾ ಶಿವಳ್ಳಿ ಗ್ರಾಮ ಪಂಚಾಯ್ತಿಯು ಜನರಿಂದ ಅನವಶ್ಯಕವಾಗಿ ಹಣ ಸುಲಿಗೆ ಮಾಡುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
‘ಅವಶ್ಯಕ ವಸ್ತುಗಳನ್ನು ತರುವ ಕಾರಣಕ್ಕೆ ಜನರು ಪೇಟೆಗೆ ಬರಲು ಪಡೆಯುವ ಪಾಸ್ಗೆ ₹ 100 ಪಡೆಯಲಾಗುತ್ತಿದೆ. ಪ್ರತಿ ಪಾಸ್ ನೀಡಲು ಹಣ ಎತ್ತುತ್ತಾರೆ. ಜನರಿಗೆ ನೆರವು ನೀಡಬೇಕಾಗಿದ್ದ ಪಂಚಾಯ್ತಿಯೇ ಈ ರೀತಿ ಹಣ ಪಡೆಯುತ್ತಿದೆ’ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜನರ ಅವಶ್ಯಕತೆಗೆ ನೀಡುವ ಪಾಸ್ಗೆ ಹಣ ಪಾವತಿಸಬೇಕಾಗಿಲ್ಲ. ಇದನ್ನು ಪರಿಶೀಲಿಸಿ, ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಉಪವಿಭಾಗಾಧಿಕಾರಿ ಡಾ.ಈಶ್ವರ ಉಳ್ಳಾಗಡ್ಡಿ ಹೇಳಿದ್ದಾರೆ.
ಜನರಿಗೆ ಸಾಧ್ಯವಾದಷ್ಟು ಸಹಾಯ ಮಾಡುವುದು ಸರ್ಕಾರ ಮತ್ತು ಗ್ರಾಮ ಪಂಚಾಯ್ತಿಯ ಕರ್ತವ್ಯ. ಪಾಸ್ ನೀಡಲು ಯಾರಿಂದಲೂ ಹಣ ಪಡೆಯುವಂತಿಲ್ಲ ಎಂದು ಡಿವೈಎಸ್ಪಿ ಜಿ.ಟಿ.ನಾಯಕ ಪ್ರತಿಕ್ರಿಯಿಸಿದ್ದಾರೆ.