ಕುಮಟಾ: `ಚಿಕ್ಕವಳಿರುವಾಗಲೇ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಏನಾದರೂ ಮಾಡಬೇಕು ಎನ್ನುವ ಕನಸು ಕಾಣುತ್ತಿದ್ದ ನಾನು ಖಷಿಯಿಂದ ಓದುವುದನ್ನು ನೋಡಿ ನನ್ನ ತಂದೆ-ತಾಯಿ ಸಂಭ್ರ್ರಮಿಸುತ್ತಿದ್ದರು' ಇದು ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಶೇ 100 ಅಂಕ ಗಳಿಸಿ ಸಾಧನೆ ಮಾಡಿರುವ ಇಲ್ಲಿಯ ಕೊಂಕಣ ಎಜುಕೇಷನ್ ಟ್ರಸ್ಟ್ ಶಾಲೆಯ ವಿದ್ಯಾರ್ಥಿನಿ ಧೀಕ್ಷಾ ನಾಯ್ಕಳ ಹೆಮ್ಮೆಯ ನುಡಿ.
ದೀಕ್ಷಾ ಎಂಟನೇ ತರಗತಿಗೆ ಕೊಂಕಣ ಎಜುಕೇಶನ್ ಟ್ರಸ್ಟ್ ಪ್ರೌಢಶಾಲೆಗೆ ಸೇರಿದ್ದಳು. ತಾಲ್ಲೂಕಿನ ಹೆಗಡೆ ಗ್ರಾಮದ ಪಾಂಡುರಂಗ ನಾಯ್ಕ ಹಾಗೂ ವೀಣಾ ನಾಯ್ಕ ಅವರ ಪೋಷಕರು. ಪಾಂಡುರಂಗ ಎಲೆಕ್ಟ್ರಿಷಿಯನ್ ತಾಯಿ ಗೃಹಿಣಿ.
ಇನ್ನೋರ್ವ ಸಾಧಕಿ ತಾಲ್ಲೂಕಿನ ಕೂಜಳ್ಳಿಯ ವಿಷ್ಣು ಭಟ್ಟ ಹಾಗೂ ಜ್ಯೋತಿ ಭಟ್ಟ ಅವರ ಪುತ್ರಿ ಮೇಘನಾ ಭಟ್ಟ.`ಲ್.ಕೆಜಿ ಯಿಂದ ಇಲ್ಲಿಯವರೆಗೆ ನನ್ನ ಓದಿಗೆ ನನ್ನ ಶಿಕ್ಷಕ ವೃಂದ ಅಪಾರ ಕೊಡುಗೆ ನೀಡಿದೆ. ನನ್ನ ಈ ಸಾಧನೆ ನನ್ನ ಪ್ರೀತಿಯ ಶಾಲೆಗೆ ಮತ್ತು ಶಿಕ್ಷಕರಿಗೆ ನಾನು ನೀಡುತ್ತಿರುವ ಪುಟ್ಟ ಕೊಡುಗೆ' ಎಂದರು.
ಮತ್ತೊಬ್ಬ ಸಾಧಕ ವಕೀಲ ಶ್ರೀನಿವಾಸ ಯು.ಎ. ಹಾಗೂ ರಮ್ಯಾ ಶ್ರೀನಿವಾಸ ಅವರ ಪುತ್ರ ಕಾರ್ತಿಕ ಭಟ್ಟ, `ಈ ಶಾಲೆಗೆ ನಾನು ಎಂಟನೇ ತರಗತಿಗೆ ಸೇರಿದಾಗ ನಾಗಾಂಜಲಿ ನಾಯ್ಕ ಎನ್ನುವ ವಿದ್ಯಾರ್ಥಿನಿ ಎಸ್ಸೆಸೆಲ್ಸಿಯಲ್ಲಿ ನೂರಕ್ಕೆ ನೂರು ಅಂಕ ಗಳಿಸಿ ಸಾಧನೆ ಮಾಡಿದ್ದಳು. ಅವಳ ಸಾಧನೆ ಕಂಡಿದ್ದ ನನಗೂ ಅವಳಂತೆ ಸಾಧನೆ ಮಾಡುವ ಆಸೆ ಉಂಟಾಯಿತು’ ಎಂದನು.
ಮುಖ್ಯ ಶಿಕ್ಷಕಿ ಸುಮಾ ಪ್ರಭು, `ಎಸ್ಸೆಸೆಲ್ಸಿ ಪರೀಕ್ಷೆಗೆ ಕುಳಿತ 152 ವಿದ್ಯಾರ್ಥಿಗಳಲ್ಲಿ 23 ಜನ ಶೇ 99, 45 ಜನ ಶೇ 98 ಹಾಗೂ 75 ಜನ ಶೇ 95 ಅಂಕ ಗಳಿಸಿರುವುದು ಹೆಮ್ಮೆಯ ಸಂಗತಿ' ಎಂದರು. ಶಾಸಕ ದಿನಕರ ಶೆಟ್ಟಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಗೌರವಿಸಿದರು.
ಶಾಲೆಯ ಅಡಳಿತ ಮಂಡಳಿ ಅಧ್ಯಕ್ಷ ಅಧ್ಯಕ ವಿ.ಆರ್. ನಾಯಕ, ಸಮಿತಿ ಸದಸ್ಯರಾದ ಶೇಷಗಿರಿ ಶಾನಭಾಗ, ಡಿ.ಡಿ. ಕಾಮತ್, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಲ್. ಭಟ್ಟ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಅಭಿನಂದಿಸಿದರು.