ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಕೋಲಾ: ‘ಯಕ್ಷ ಋಷಿ’ ನೆನಪಿಗೆ ಮೋತಿಗುಡ್ಡದಲ್ಲಿ ಮೈದಳೆದ ‘ಅಶ್ವತ್ಥಧಾಮ’

ಹೊಸ್ತೋಟ ಭಾಗವತರ ತಪೋಭೂಮಿಯ ಅಭಿವೃದ್ಧಿ ಕಾರ್ಯ, ಪುತ್ಥಳಿ ಅನಾವರಣ
Last Updated 15 ಜನವರಿ 2022, 7:40 IST
ಅಕ್ಷರ ಗಾತ್ರ

ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯ ಅತಿ ಎತ್ತರದ ಪ್ರದೇಶವಾಗಿರುವ, ತಾಲ್ಲೂಕಿನ ಮೋತಿಗುಡ್ಡದಲ್ಲಿ ಶುಕ್ರವಾರ ಸಂಜೆ ಸಂಭ್ರಮದ ವಾತಾವರಣ. ಇಳಿಸಂಜೆಯ ತಂಗಾಳಿಗೆ ಯಕ್ಷಗಾನ, ಚಂಡೆ, ಮೃದಂಗಗಳ ಶಬ್ದ ಮೇಳೈಸಿ ಮಾರ್ದನಿಸುತ್ತಿತ್ತು. ಇದೇ ಮೊದಲ ಬಾರಿಗೆ ಊರಿನಲ್ಲಿನ ಅದ್ಧೂರಿ ಕಾರ್ಯಕ್ರಮವನ್ನು ಕಣ್ತುಂಬಿಕೊಂಡ ಗ್ರಾಮಸ್ಥರು ಪುಳಕಿತರಾಗಿದ್ದರು.

‘ಯಕ್ಷ ಋಷಿ’‌ ಹೊಸ್ತೋಟ ಮಂಜುನಾಥ ಭಾಗವತ ಅವರ ನೆನಪಿನಲ್ಲಿ ಮೋತಿಗುಡ್ಡದಲ್ಲಿ ನಿರ್ಮಾಣವಾದ ‘ಅಶ್ವತ್ಥಧಾಮ’ದ ಉದ್ಘಾಟನೆ ಹಾಗೂ ಅವರ ಪುತ್ಥಳಿಯ ಅನಾವರಣ ಕಾರ್ಯಕ್ರಮವು, ಸ್ಥಳದ ಮಹತ್ವವನ್ನು ಮತ್ತಷ್ಟು ಸಾರಿ ಹೇಳಿತು.

ಇಲ್ಲಿನ ಎಲ್ಲಾ ಅಭಿವೃದ್ಧಿ ಕಾರ್ಯಗಳಿಗೆ ವೈಯಕ್ತಿಕ ಹಣಕಾಸಿನ ನೆರವು ನೀಡಿದ ಕಾರವಾರ– ಅಂಕೋಲಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ಉದ್ಘಾಟನೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ‘ಜೀವನದಲ್ಲಿ ಎಲ್ಲಾ ಆಸೆಗಳನ್ನು ತ್ಯಜಿಸಿ ಯಕ್ಷಗಾನವನ್ನು ನಾಡಿಗೆ ಹಂಚುವ ಕೈಂಕರ್ಯದಲ್ಲಿ ತೊಡಗಿದ್ದವರು ಮಂಜುನಾಥ ಭಾಗವತರು. ಅವರ ಜೀವನಶೈಲಿ ಇಂದಿನ ಪೀಳಿಗೆಗೆ ಪ್ರೇರಕವಾಗಿದೆ. ಭಾಗವತರು ನೆಲೆಸಿದ ತಪೋಭೂಮಿ ಮೋತಿಗುಡ್ಡ ನನ್ನ ಕ್ಷೇತ್ರದಲ್ಲಿದೆ ಎನ್ನುವುದೇ ಹೆಮ್ಮೆ. ಮುಂದೆ ಅಶ್ವತ್ಥಧಾಮ ರಾಷ್ಟ್ರಮಟ್ಟದಲ್ಲಿ ಗುರುತಾಗುತ್ತದೆ’ ಎಂದು ಹೇಳಿದರು.

‘ಈ ಕ್ಷೇತ್ರದ ಅಭಿವೃದ್ಧಿಗೆ ಎಲ್ಲರನ್ನೂ ಎಲ್ಲವನ್ನೂ ಒಳಗೊಳ್ಳುವ ಒಂದು ಸಮಿತಿ ರಚನೆಯಾಗಲಿ. ಮೋತಿಗುಡ್ಡದಲ್ಲಿ ಭಾಗವತರ ನೆನಪಿನಲ್ಲಿ ಸಭಾಭವನ ಮತ್ತು ಇಲ್ಲಿಗೆ ಬರಲು ರಸ್ತೆಯನ್ನು ನನ್ನ ಶಾಸಕತ್ವದ ಅವಧಿಯಲ್ಲಿಯೇ ನಿರ್ಮಿಸುತ್ತೇನೆ’ ಎಂದು ಭರವಸೆ ನೀಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಅಶ್ವತ್ಥಧಾಮ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಶಿವಾನಂದ ಕಳವೆ, ‘ಮೋತಿಗುಡ್ಡದಲ್ಲಿ ಸಕಾರಾತ್ಮಕ ಚಿಂತನೆಗಳು ನೀರಿನ ಬುಗ್ಗೆಯಂತೆ ಜಿನುಗುತ್ತಿವೆ. ಹೊಸ್ತೋಟ ಮಂಜುನಾಥ ಭಾಗವತ ಅವರ ಸಾಧನೆಗೆ ಇದು ಪ್ರೇರಕ ಶಕ್ತಿಯಾಗಿದೆ. ಅವರ ನೆನಪುಗಳನ್ನು ಕುಟೀರದಲ್ಲಿ ಸಂಗ್ರಹಿಸಲಾಗುತ್ತಿದೆ. ಸಾರ್ವಜನಿಕರು ಅವರೊಂದಿಗಿನ ಒಡನಾಟದ ಕುರುಹು, ಯಕ್ಷಗಾನದ ಹಸ್ತಪ್ರತಿ ಮತ್ತಿತರ ಪರಿಕರಗಳನ್ನು ನೀಡಬೇಕು. ಅವರ ಹಸ್ತಪ್ರತಿಗಳನ್ನು ಸಂಗ್ರಹಿಸಿ ಸಂಶೋಧನೆಗೆ ಒಳಪಡಿಸಲಾಗುವುದು. ಸಾಂಸ್ಕೃತಿಕ ಮತ್ತು ರಚನಾತ್ಮಕ ಮನಸ್ಸಿನ ಒಬ್ಬ ಜನಪ್ರತಿನಿಧಿಯಾಗಿ, ಶಾಸಕಿ ರೂಪಾಲಿ ನಾಯ್ಕ ಅವರ ಅಭಿಪ್ರೇರಣೆಯಿಂದ ಭಾಗವತರ ಕನಸು ನನಸಾಗಿದೆ’ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಅಶ್ವತ್ಥಧಾಮ ಪರಿಕಲ್ಪನೆಯ ರೂವಾರಿ ವಸಂತ ಕುಮಾರ ಕತಗಾಲ, ‘ಇಲ್ಲಿ ಶೆಡ್ ನಿರ್ಮಿಸುವ ಬಯಕೆ ಮಂಜುನಾಥ ಭಾಗವತರಿಗೆ ಇತ್ತು. ಅವರ ಕೊನೆಯ ದಿನಗಳ ಬಯಕೆಗೆ ಪೂರಕವಾಗಿ ಅಭಿವೃದ್ಧಿ ಕಾರ್ಯ ನಡೆದಿದೆ. ಇಲ್ಲಿನ ಸ್ಥಳೀಯರ ಸಹೃದಯ ಮನಸ್ಸು ಮತ್ತು ಕಾರ್ಯ ತತ್ಪರತೆ, ಭಾಗವತರ ಮೇಲಿನ ಗೌರವದ ಪ್ರತಿರೂಪ ಅಭಿವೃದ್ಧಿ ಕಾರ್ಯಗಳಲ್ಲಿ ಪ್ರತಿಬಿಂಬಿಸುತ್ತಿವೆ’ ಎಂದು ಹೇಳಿದರು.

ಹಿರಿಯ ಯಕ್ಷಗಾನ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಮಾತನಾಡಿ, ‘ವೇದವ್ಯಾಸ, ಕುಮಾರವ್ಯಾಸಕ್ಕೆ ಭಾಷ್ಯ ಬರೆಯುವ ಶಕ್ತಿ ಮಂಜುನಾಥ ಭಾಗವತರಿಗೆ ಇತ್ತು. ಜಿಲ್ಲೆಯಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ಒಳಾಂಗಣ ಥಿಯೇಟರ್ ನಿರ್ಮಾಣವಾಗಬೇಕು’ ಎಂದು ಆಶಯ ವ್ಯಕ್ತಪಡಿಸಿದರು.

ಗ್ರಾಮದ ಹಿರಿಯರಾದ ಮಾಧವ ಹೊಸ್ಮನಿ ಮಂಜುನಾಥ, ಮೋತಿಗುಡ್ಡದಲ್ಲಿ ಭಾಗವತರ ತಪಸ್ಸು, ಜೀವನಶೈಲಿ, ಸಾಧನೆಯ ಮಜಲುಗಳನ್ನು ನೆನಪಿಸಿಕೊಂಡರು.

ಭಾಸ್ಕರ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಗಿರೀಶ ಭಟ್ ಸ್ವಾಗತಿಸಿದರು. ನಾರಾಯಣ ಹೊಸ್ಮನಿ ವಂದಿಸಿದರು. ಮೂರ್ತಿ ಕಲಾಕಾರ ಕಾರ್ಕಳದ ಗುಣವಂತೇಶ್ವರ ಭಟ್ಟ ಅವರನ್ನು, ಮಂಜುನಾಥ ಭಾಗವತರ ಒಡನಾಡಿಗಳು ಮತ್ತು ಹಿತೈಷಿಗಳನ್ನು ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮದ ನಂತರ ನಾಡಿನ ಪ್ರಸಿದ್ಧ ಯಕ್ಷಗಾನ ಕಲಾವಿದರ ಸಂಗಮದಿಂದ ‘ಲವ– ಕುಶ’ ಯಕ್ಷಗಾನ ಪ್ರದರ್ಶಿಸಲಾಯಿತು. ಶಾಸಕಿ ರೂಪಾಲಿ ನಾಯ್ಕ ಸಂಪೂರ್ಣ ಯಕ್ಷಗಾನವನ್ನು ವೀಕ್ಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT