ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೆಂಕಟಸ್ವಾಮಿಗೆ ಟಿಕೆಟ್ ನೀಡಲು ಒತ್ತಾಯ

ಸಾಮಾಜಿಕ ನ್ಯಾಯದಡಿ ಕನಿಷ್ಠ ಮಾದಿಗ ಸಮುದಾಯದಕ್ಕೆ ಅವಕಾಶ ನೀಡಲು ಮನವಿ
Last Updated 20 ಮಾರ್ಚ್ 2018, 6:17 IST
ಅಕ್ಷರ ಗಾತ್ರ

ದೇವನಹಳ್ಳಿ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ದೇವನಹಳ್ಳಿ ಕ್ಷೇತ್ರದಿಂದ ವೆಂಕಟಸ್ವಾಮಿಗೆ ಟಿಕೆಟ್ ನೀಡಬೇಕು. ತಪ್ಪಿದರೆ ಮಾದಿಗ ಸಮುದಾಯಕ್ಕೆ ನೀಡಬೇಕು ಎಂದು ಕಾಂಗ್ರೆಸ್ ಪರಿಶಿಷ್ಟ ಜಾತಿ ವಿವಿಧ ಘಟಕದ ಮುಖಂಡರು ರಾಜ್ಯ ವರಿಷ್ಠರನ್ನು ಒತ್ತಾಯಿಸಿದರು.

ಇಲ್ಲಿನ ಪ್ರವಾಸಿ ಮಂದಿರದ ಆವರಣದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಮಾತನಾಡಿದ ಪುರಸಭೆ ಅಧ್ಯಕ್ಷ ಎಂ ಮೂರ್ತಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ವೆಂಕಟಸ್ವಾಮಿ ಕೇವಲ 1,800 ಮತಗಳಿಂದ ಸೋತಿದ್ದಾರೆ. ಪಕ್ಷಕ್ಕೆ ಧಕ್ಕೆಯಾಗುವ ರೀತಿಯಲ್ಲಿ ಹೇಳಿಕೆ ನೀಡಿ ಪಕ್ಷದ ವರ್ಚಸ್ಸು ಕಡಿಮೆ ಮಾಡಲು ಹೊರಟಿದ್ದಾರೆ ಎಂದು ಅವರು ಆರೋಪಿಸಿದರು.

‘ಸಂಸತ್‌ ಸದಸ್ಯ ಎಂ. ವೀರಪ್ಪಮೊಯಿಲಿ ಯಾರಿಗೆ ಟಿಕೆಟ್ ಕೊಡಿಸುತ್ತಾರೆ ಅವರಿಗೆ ನಮ್ಮ ಬೆಂಬಲವಿದೆ. ಪ್ರಸ್ತುತ ಆಕಾಂಕ್ಷಿತರ 18 ಅರ್ಜಿ ಸಲ್ಲಿಕೆಯಾಗಿದೆ. ಅರ್ಜಿ ಸಲ್ಲಿಸಿದವರ ಪೈಕಿ ಎಷ್ಟು ಮಂದಿಗೆ ಕ್ಷೇತ್ರದ ಕಾರ್ಯಕರ್ತರ ಪರಿಚಯವಿದೆ’ ಎಂದು ಪ್ರಶ್ನಿಸಿದರು.

ಹೊರಗಡೆಯಿಂದ ಬಂದು ಟಿಕೆಟ್‌ ಪಡೆದು ಎರಡು ಬಾರಿ ಸ್ಫರ್ಧಿಸಿದ್ದ ಕಾಂಗ್ರೆಸ್‌ ಅಭ್ಯರ್ಥಿಗಳ ಕತೆ ಏನಾಗಿದೆ ಎಂಬುದನ್ನು ವರಿಷ್ಠರು ಅರ್ಥ ಮಾಡಿಕೊಂಡರೆ ಒಳ್ಳೆಯದು ಎಂದು ಅವರು ಹೇಳಿದರು.

ಛಲವಾದಿ ಸಮುದಾಯಕ್ಕೆ ಈಗಾಗಲೇ ನಾಲ್ಕು ಬಾರಿ ಟಿಕೆಟ್ ನೀಡಲಾಗಿದೆ. ಮಾದಿಗ ಸಮುದಾಯಕ್ಕೆ ಈವರೆಗೂ ನೀಡಿಲ್ಲ. ಟಿಕೆಟ್‌ ಆಕಾಂಕ್ಷಿತರಾಗಿರುವ ಛಲವಾದಿ ನಾರಾಯಣಸ್ವಾಮಿ ಕ್ಷೇತ್ರಕ್ಕೆ ಅಪರಿಚಿತರು. ಅವರಿಗೆ ಟಿಕೆಟ್‌ ನೀಡಿದರೆ ಸೋಲಿಸುತ್ತೇವೆ ಎಂದರು.

ವೆಂಕಟಸ್ವಾಮಿಗೆ ಟಿಕೆಟ್‌ ನೀಡಲು ಸಾಧ್ಯವೇ ಇಲ್ಲ ಎಂದಾದರೆ ಸಾಮಾಜಿಕ ನ್ಯಾಯದಡಿ ಮಾದಿಗ ಸಮುದಾಯಕ್ಕೆ ನೀಡಬೇಕು. ಇಲ್ಲದಿದ್ದರೆ ಚುನಾವಣೆಯಲ್ಲಿ ಮಾದಿಗ ಸಮುದಾಯ ತಟಸ್ಥ ನಿಲುವು ತಾಳಲಿದೆ ಎಂದು ಅವರು ಮನವಿ ಮಾಡಿದರು.

ವಿಜಯಪುರ ಬ್ಲಾಕ್‌ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಮುನಿರಾಜು ಮತ್ತು ಮುಖಂಡ ಚಿನ್ನಪ್ಪ ಮಾತನಾಡಿ, ವೆಂಕಟಸ್ವಾಮಿ ಸಾಮಾನ್ಯ ಕಾರ್ಯಕರ್ತರಿಗೂ ಚಿರಪರಿಚಿತರು. ಅವರಿಗೆ ಟಿಕೆಟ್‌ ನೀಡಿದರೆ ಪಕ್ಷ ಗೆಲುವು ಸಾಧಿಸುವುದರಲ್ಲಿ ಅನುಮಾನವಿಲ್ಲ. ಛಲವಾದಿ ನಾರಾಯಣಸ್ವಾಮಿಗೆ ಟಿಕೆಟ್‌ ನೀಡಿದರೆ ಸೋಲು ಕಟ್ಟಿಟ್ಟ ಬುತ್ತಿ. ಇಲ್ಲಸಲ್ಲದ ಹೇಳಿಕೆ ನೀಡಿ ಟಿಕೆಟ್‌ ತಪ್ಪಿಸುವ ಹುನ್ನಾರ ನಡೆಯುತ್ತಿರುವುದು ಸರಿಯಲ್ಲ. 1975 ರಿಂದ ಮಾದಿಗ ಸಮುದಾಯಕ್ಕೆ ಅನ್ಯಾಯವಾಗುತ್ತಲೇ ಇದೆ ಎಂದು ದೂರಿದರು.

ಮುಖಂಡ ಚಂದೇನಹಳ್ಳಿ ಮುನಿಯಪ್ಪ ಮತ್ತು ಪುರಸಭೆ ಸದಸ್ಯ ಎಂ.ನಾರಾಯಣಸ್ವಾಮಿ ಮಾತನಾಡಿ, ವೆಂಕಟಸ್ವಾಮಿಗೆ ಟಿಕೆಟ್‌ ನೀಡಿ; ಇಲ್ಲದಿದ್ದರೆ ಮಾದಿಗ ಸಮುದಾಯಕ್ಕೆ ನೀಡಬೇಕು ಎಂದು ಒತ್ತಾಯಿಸಿದರು. ಮುಖಂಡ ಭುವನಹಳ್ಳಿ ಆನಂದ್‌, ಎಂ.ಕುಮಾರ್‌, ಮುರಳಿ ಇದ್ದರು.
**
ಟಿಕೆಟ್‌ ನೀಡದಿರಲು ಮನವಿ
ವಿಜಯಪುರ: ‘ದೇವನಹಳ್ಳಿ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಕೆ. ವೆಂಕಟಸ್ವಾಮಿ ಅವರಿಗೆ ಟಿಕೆಟ್‌ ನೀಡಬಾರದು ಎಂದು ಸಂಸದ ಎಂ. ವೀರಪ್ಪ ಮೊಯಿಲಿ, ಕೆ.ಪಿ.ಸಿ.ಸಿ. ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹಾಗೂ ವೀಕ್ಷಕರಿಗೆ ಮನವಿ ಮಾಡಿದ್ದೇವೆ’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯರಾದ ಲಕ್ಷ್ಮೀನಾರಾಯಣಪ್ಪ, ಕೆ.ಸಿ.ಮಂಜುನಾಥ್ ಪತ್ರಿಕಾ ಹೇಳಿಕೆ ನೀಡಿದ್ದಾರೆ.

2013ರ ಚುನಾವಣೆಯಲ್ಲಿ ಸೋತ ನಂತರ ಕೆ.ವೆಂಕಟಸ್ವಾಮಿ ಅವರು ಪುನಃ ಕ್ಷೇತ್ರಕ್ಕೇ ಬಂದಿಲ್ಲ. ಪಕ್ಷದ ಕಾರ್ಯಕರ್ತರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ಸ್ಥಳೀಯ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡಿಲ್ಲ. ಕ್ಷೇತ್ರದ ಮುಖಂಡರನ್ನು ಕಡೆಗಣಿಸಿದ್ದಾರೆ.

ಆದ್ದರಿಂದ ಇತರೆ ಟಿಕೆಟ್‌ ಆಕಾಂಕ್ಷಿಗಳಾದ ಮುನಿನರಸಿಂಹಯ್ಯ, ಎಂ.ನಾರಾಯಣಸ್ವಾಮಿ, ಛಲವಾದಿ ನಾರಾಯಣಸ್ವಾಮಿ, ಸುರೇಶ್, ಚಿನ್ನಪ್ಪ, ಮಾರುತಿ ಇವರಲ್ಲಿ ಯಾರಿಗಾದರೂ ಕೊಡಲಿ. ನಾವು ಕೆಲಸ ಮಾಡುತ್ತೇವೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT