ಕಾರವಾರ: ದೇಶದ 75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆಯ ಭಾಗವಾಗಿ ಕಾರವಾರ ಸುನ್ನಿ ಮುಸ್ಲಿಂ ಸಂಘದಿಂದ ಶನಿವಾರ ಸಂಜೆ ಮೆರವಣಿಗೆ ಆಯೋಜಿಸಲಾಯಿತು. ತಾಲ್ಲೂಕಿನ ವಿವಿಧ ಭಾಗಗಳಿಂದ ನೂರಾರು ಮುಸ್ಲಿಮರು ಭಾಗವಹಿಸಿದ್ದರು.
ಕೆ.ಇ.ಬಿ ಬಳಿಯ ಮದೀನಾ ಜಾಮಿಯಾ ಮಸೀದಿಯಿಂದ ಮೆರವಣಿಗೆ ಆರಂಭಿಸಿ ಸವಿತಾ ಹೋಟೆಲ್ ವೃತ್ತ, ಹೂವಿನ ಚೌಕ, ಅಂಬೇಡ್ಕರ್ ವೃತ್ತ, ಶಿವಾಜಿ ವೃತ್ತ, ಸುಭಾಸ್ ವೃತ್ತದ ಮೂಲಕ ಸಾಗಿದರು. ಬಳಿಕ ಗಾಂಧಿ ಉದ್ಯಾನದಲ್ಲಿ ಮಹಾತ್ಮ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಮೆರವಣಿಗೆ ಮುಕ್ತಾಯವಾಯಿತು.
ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ರಾಮ ನಾಯ್ಕ, ಸುನ್ನಿ ಮುಸ್ಲಿಂ ಸಂಘದ ಅಧ್ಯಕ್ಷ ಮುಜಾಮಿಲ್ ಮಾಂಡಲೀಕ್, ಪ್ರಮುಖರಾದ ಇಮ್ತಿಯಾಜ್ ಬುಖಾರಿ, ಬಾಬು ಶೇಖ್, ಮಕ್ಬೂಲ್ ಶೇಖ್, ಅಲಿ ಖುರೇಶಿ, ಸಲೀಂ ಶೇಖ್, ಯುವ ಕಾಂಗ್ರೆಸ್ನ ಅಶ್ರಫ್ ಇದ್ದರು.