ಶಿರಸಿ: ತಾಲ್ಲೂಕಿನ ಮತ್ತಿಘಟ್ಟ ಸಮೀಪದ ದೇವನಮನೆ ಭಾಗದಲ್ಲಿ ಹುಲಿಗಳು ಕಾಣಿಸಿಕೊಂಡಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ನಾಲ್ಕು ಜಾನುವಾರು ಹುಲಿಗೆ ಬಲಿಯಾಗಿವೆ. ಒಟ್ಟು ಐದು ಪಟ್ಟೆ ಹುಲಿಗಳು ಇರುವ ಸಾಧ್ಯತೆಯಿದೆ ಎಂದು ಗ್ರಾಮಸ್ಥರು ಶಂಕಿಸಿದ್ದಾರೆ.
ಕಾಡಿನ ದಾರಿಯಲ್ಲಿ ಹುಲಿಗಳ ಓಡಾಡುತ್ತಿರುವುದನ್ನು ಸ್ಥಳೀಯರಾದ ಶ್ರೀಮತಿ ಹೆಗಡೆ ಪ್ರತ್ಯಕ್ಷವಾಗಿ ನೋಡಿದ್ದಾರೆ. ದುಂಡಲಮನೆಯ ವೆಂಕಟರಮಣ ಹೆಗಡೆ ಅವರಿಗೆ ಸೇರಿದ ಮೂರು ಹಾಗೂ ಭೈರವೇಶ್ವರ ಹೆಗಡೆ ಅವರ ಒಂದು ಆಕಳನ್ನು ಹುಲಿಗಳು ಹಿಡಿದಿವೆ. ಸುದ್ದಿ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ, ಗುರುವಾರ ಸ್ಥಳಕ್ಕೆ ಭೇಟಿ ನೀಡಿದರು.
’ಮೂರ್ನಾಲ್ಕು ದಿನಗಳಿಂದ ಹುಲಿ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದೆ. ಶಾಲೆಗೆ ಹೋಗುವ ಮಕ್ಕಳು, ಬಸ್ಸಿಗೆ ಕಾಯುವವರು ಭಯಗೊಳ್ಳುವಂತಾಗಿದೆ. ಅರಣ್ಯ ಇಲಾಖೆ ತಕ್ಷಣ ಎಚ್ಚೆತ್ತು, ಕಾರ್ಯಪ್ರವೃತವಾಗಬೇಕು’ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
‘ಜಾನುವಾರುಗಳ ಮೇಲೆ ದಾಳಿ ನಡೆಸಿರುವುದು ಹುಲಿಯೇ ಹೌದೊ ಅಲ್ಲವೊ ಎಂಬ ಬಗ್ಗೆ ಕೂಲಂಕಷ ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಜಾನ್ಮನೆ ವಲಯ ಅರಣ್ಯಾಧಿಕಾರಿ ಪವಿತ್ರಾ ಯು.ಜೆ ಪ್ರತಿಕ್ರಿಯಿಸಿದ್ದಾರೆ.