‘ಜನರ ಆರೋಗ್ಯ ಕಾಪಾಡಲು ಸರ್ಕಾರ ಮಾಡಿದ ಆದೇಶವನ್ನು ನಾವೂ ಪಾಲಿಸುತ್ತೇವೆ. ಆದರೆ, ಮೀನುಗಾರಿಕೆ ಇಲ್ಲದ ಕಾರಣ ಹೊಟ್ಟೆಪಾಡಿಗೆ ಏನು ಮಾಡಬೇಕು ಎಂದು ತೋಚುತ್ತಿಲ್ಲ. ನಾವು ಪಾತಿ ದೋಣಿಗಳಲ್ಲಿ ಮೀನುಗಾರಿಕೆ ಮಾಡುವವರು. ಹಾಗಾಗಿ ಮೀನು ಸಿಕ್ಕಿದ ಪ್ರಮಾಣಕ್ಕೆ ಅನುಗುಣವಾಗಿ ದಿನದ ಆದಾಯ ನಿರ್ಧಾರವಾಗುತ್ತದೆ. ₹ 500– ₹ 600ವರೆಗೆ ಪ್ರತಿ ದೋಣಿಯಲ್ಲಿ ದುಡಿಯಲು ಅವಕಾಶವಾಗುತ್ತಿತ್ತು. ಆದರೆ, ಈಗ ದುಡಿಮೆಯೇ ಸಂಪೂರ್ಣ ನಿಂತಿದೆ. ಪೊಲೀಸರು ಬಂದು ಎಲ್ಲ ಚಟುವಟಿಕೆಗಳನ್ನು ನಿಲ್ಲಿಸುವಂತೆ ಹೇಳಿದರು. ಅದರಂತೆ ನಾವು ಸ್ಥಗಿತಗೊಳಿಸಿದ್ದೇವೆ’ ಎಂದು ಹೇಳಿದರು.