ಯಲ್ಲಾಪುರ: ಪಶ್ಚಿಮ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್. ವಿ. ಸಂಕನೂರ ಯಲ್ಲಾಪುರ ಪಟ್ಟಣದಲ್ಲಿ ಶುಕ್ರವಾರ ಮತ ಯಾಚನೆ ಮಾಡಿದರು. ಪಟ್ಟಣದ ರೋಜರಿ ಪ್ರೌಢಶಾಲೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತಹಶೀಲ್ದಾರ್ ಕಚೇರಿ ಹಾಗೂ ವಿವಿಧೆಡೆ ಮತದಾರರನ್ನು ಭೇಟಿ ಮಾಡಿದರು.
ನಂತರ ಬಿಜೆಪಿ ಕಾರ್ಯಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮತದಾರರು ತಮ್ಮನ್ನು ಪುನರಾಯ್ಕೆ ಮಾಡಿದಲ್ಲಿ ಪದವೀಧರ ನಿರುದ್ಯೋಗಿ ಗಳಿಗೆ ನಿರುದ್ಯೋಗ ಭತ್ಯೆ ನೀಡುವ ಯೋಜನೆಯನ್ನು ಆರಂಭಿಸಲು ಸರ್ಕಾರದ ಮೇಲೆ ಒತ್ತಡ ಹೇರುವುದಾಗಿ ಭರವಸೆ ನೀಡಿದರು.
ಈಗಾಗಲೇ ನಿರುದ್ಯೋಗಿ ಪದವೀಧರರ ಸಮಸ್ಯೆ ಬಗೆಹರಿಸಲು ಸದನದ ಒಳಗೂ ಮತ್ತು ಹೊರಗೂ ಪ್ರಯತ್ನಿಸಿದ್ದೇನೆ. ಕ್ಷೇತ್ರದಲ್ಲಿ ವಿವಿಧೆಡೆ ಉದ್ಯೋಗ ಮೇಳ ಆಯೋಜಿಸಿ, ಅವರಿಗೆ ಉದ್ಯೋಗ ಕೊಡಿಸುವಲ್ಲೂ ಶ್ರಮಿಸಿದ್ದೇನೆ. ಕ್ಷೇತ್ರದಲ್ಲಿನ ಶಿಕ್ಷಕರು ಹಾಗೂ ಎಲ್ಲಾ ಇಲಾಖೆಯ ಅಧಿಕಾರಿಗಳ ಸಮಸ್ಯೆಗಳ ಕುರಿತು ಸಹ ಸದನದ ಗಮನ ಸೆಳೆದಿದ್ದೇನೆ. ಹಿಂದಿನ ಅವಧಿಯ ಸತ್ಕಾರ್ಯಗಳು ಗೆಲುವಿಗೆ ಸಹಕಾರಿಯಾಗಲಿದ್ದು ಜಯಗಳಿಸುವ ವಿಶ್ವಾಸ ವ್ಯಕ್ತಪಡಿಸಿದರು.
ಸಚಿವ ಶಿವರಾಮ ಹೆಬ್ಬಾರ ಮಾತನಾಡಿ, ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಮತದಾರರು ಒಲವು ವ್ಯಕ್ತಪಡಿಸುತ್ತಿದ್ದಾರೆ. ಇಡೀ ಕ್ಷೇತ್ರದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು, ಸಂಕನೂರ 25 ಸಾವಿರಕ್ಕೂ ಅಧಿಕ ಮತದಿಂದ ಗೆಲ್ಲುವ ವಿಶ್ವಾಸವಿದೆ. ಆಡಳಿತ ಪಕ್ಷದ ಸಂಕನೂರ ಆಯ್ಕೆಯಾದರೆ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಅವರು ಹೇಳಿದರು.
ಎಂಎಲ್ಸಿ ಶಾಂತಾರಾಮ ಸಿದ್ದಿ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಗೋಪಾಲಕೃಷ್ಣ ಗಾಂವ್ಕಾರ, ಪ್ರಧಾನ ಕಾರ್ಯದರ್ಶಿಗಳಾದ ಡಾ.ರವಿ ಭಟ್ಟ ಬರಗದ್ದೆ, ಪ್ರಸಾದ ಹೆಗಡೆ, ಬಾಬಾ ಸಾಬ್ ಅಲನ್ ಇದ್ದರು.