ಶಿರಸಿ: ಜಾತೀಯತೆಯ ಬೇಧದಿಂದ ಮತಾಂತರ ಪಿಡುಗು ತಲೆದೋರಿದೆ. ಅಸ್ಪೃಶ್ಯತೆ ತೊಲಗಿ ನಾವೆಲ್ಲರೂ ಒಂದು ಎಂಬ ಭಾವ ಮೂಡಿದಾಗ ಹಿಂದುತ್ವ ಬಲಗೊಳ್ಳುತ್ತದೆ ಎಂದು ಪರ್ಯಾವರಣ ಸಂರಕ್ಷಣೆ ಗತಿವಿದಿಯ ರಾಜ್ಯ ಘಟಕದ ಸಂಚಾಲಕ ಜಯರಾಮ ಬೊಳ್ಳಾಜಿ ಹೇಳಿದರು.
ಇಲ್ಲಿನ ಮಾರಿಕಾಂಬಾ ಹೈಸ್ಕೂಲ್ ಮೈದಾನದಲ್ಲಿ ಶನಿವಾರ ಯುಗಾದಿ ಉತ್ಸವ ಸಮಿತಿ ಆಯೋಜಿಸಿದ್ದ ಸಮಾವೇಶದಲ್ಲಿ ಮಾತನಾಡಿದ ಅವರು, ‘ಪರಿಸರದ ವಿರುದ್ಧ ಮನುಷ್ಯ ಹೋದ ಕಾರಣಕ್ಕೆ ಎರಡು ವರ್ಷ ವಿಪ್ಲವ ಅನುಭವಿಸಬೇಕಾಯಿತು. ಪರಿಸರಕ್ಕೆ ಪೂರಕವಾಗಿ ಬದುಕುವುದನ್ನು ಕಲಿಯಿರಿ’ ಎಂದರು.
ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ, ‘ಭಗವದ್ಗೀತೆ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ. ಅದರ ಚಿಂತನೆಗಳು ಸಾರ್ವಕಾಲಿಕ, ಸರ್ವಹಿತದಿಂದ ಕೂಡಿದೆ’ ಎಂದರು.
ಅತ್ತಿವೇರಿ ಬಸವಧಾಮದ ಬಸವೇಶ್ವರಿ ಮಾತಾಜಿ, ‘ಜಾತೀಯತೆಯ ರೋಗದಿಂದ ಹೊರಬೇಕಾಗಿದೆ. ಧರ್ಮ ಎಲ್ಲರನ್ನೂ ಒಗ್ಗೂಡಿಸಿಕೊಂಡು ಸಾಗಬೇಕು’ ಎಂದರು.
ಯುಗಾದಿ ಉತ್ಸವ ಸಮಿತಿ ಅಧ್ಯಕ್ಷ ಕೃಷ್ಣಾನಂದ ಕೊಡಿಯಾ, ಗೌರವಾಧ್ಯಕ್ಷ ಎಂ.ಎಂ.ಭಟ್ ಕಾರೆಕೊಪ್ಪ, ಸಂಚಾಲಕ ಗೋಪಾಲ ದೇವಾಡಿಗ, ಸಲಹೆಗಾರ ರಮೇಶ ದುಬಾಶಿ, ದೀಪಾ ಮಹಾಲಿಂಗಣ್ಣನವರ ಇದ್ದರು.
ಗಮನಸೆಳೆದ ಸ್ತಬ್ಧಚಿತ್ರ:
ಮಾರಿಕಾಂಬಾ ಹೈಸ್ಕೂಲ್ ಮೈದಾನದಿಂದ ಮಾರಿಕಾಂಬಾ ದೇವಸ್ಥಾನದವರೆಗೆ ಭವ್ಯ ಶೋಭಾಯಾತ್ರೆ ನಡೆಯಿತು. 25ಕ್ಕೂ ಹೆಚ್ಚು ಸ್ತಬ್ಧಚಿತ್ರಗಳು ಪಾಲ್ಗೊಂಡಿದ್ದವು. ಬ್ರಹ್ಮಶ್ರೀ ನಾರಾಯಣಗುರು, ಡಾ.ಶಿವಕುಮಾರ ಸ್ವಾಮೀಜಿ ಅವರ ಸ್ತಬ್ಧಚಿತ್ರಗಳು ಸಾಮಾಜಿಕ ಸಂದೇಶ ಸಾರಿದವು. ಧಾರ್ಮಿಕ ಪರಂಪರೆ ಬಿಂಬಿಸುವ ಸ್ತಬ್ಧಚಿತ್ರಗಳು ಗಮನಸೆಳೆದವು.