ಶಿರಸಿ: ‘ಹಾಲು, ಪೆಟ್ರೋಲ್ ಸೇರಿದಂತೆ ಅಗತ್ಯ ವಸ್ತುಗಳಿಗೆ ಹಣ ನೀಡಿ ಖರೀದಿಸುವ ಜನ ಕರೆಂಟ್ ಬಿಲ್ ಪಾವತಿಗೆ ಹಿಂದೇಟು ಹಾಕ್ತಾರ್ರಿ...ಈ ಮಳೆಗಾಲದಲ್ಲಿ ಕರೆಂಟ್ ನಿರ್ವಹಣೆ ಮಾಡಬೇಕೋ, ಕೋಟ್ಯಂತರ ರೂಪಾಯಿ ಬಿಲ್ ವಸೂಲಿ ಮಾಡಬೇಕೊ ಎಂಬ ಚಿಂತೆ ಕಾಡ್ತಿದೆ’
ಹೀಗೆ ಬೇಸರ ತೋಡಿಕೊಂಡವರು ಹೆಸ್ಕಾಂ ಶಿರಸಿ ವೃತ್ತದ ಹಿರಿಯ ಅಧಿಕಾರಿಗಳು. ನಾಲ್ಕು ವಿಭಾಗಗಳನ್ನು ಒಳಗೊಂಡಿರುವ ಹೆಸ್ಕಾಂ ವೃತ್ತದಲ್ಲಿ ₹26.80 ಕೋಟಿ ವಿದ್ಯುತ್ ಬಿಲ್ ಬಾಕಿ ಇದೆ. ಈ ಪೈಕಿ ಗ್ರಾಮ ಪಂಚಾಯ್ತಿಗಳಿಂದ ₹5.10 ಕೋಟಿಯಷ್ಟು ಮೊತ್ತದ ಹಣ ಪಾವತಿಗೆ ಬಾಕಿ ಉಳಿದುಕೊಂಡಿದೆ. ಗೃಹ ಬಳಕೆದಾರರಿಂದ ₹13 ಕೋಟಿಗೂ ಹೆಚ್ಚು ಮೊತ್ತದ ಬಿಲ್ ಪಾವತಿಯಾಗದೆ ಉಳಿದುಕೊಂಡಿದೆ.
ಬಾಕಿ ಇರುವ ವಿದ್ಯುತ್ ಬಿಲ್ ವಸೂಲಿಗೆ ಹೆಸ್ಕಾಂ ಈಚೆಗೆ ಅಭಿಯಾನ ಆರಂಭಿಸಿದೆ. ಇಲಾಖೆಯ ನೊಟೀಸ್ಗೂ ಬಗ್ಗದೆ ಬಿಲ್ ಬಾಕಿ ಉಳಿಸಿಕೊಂಡವರ ಮನೆಯ ಫ್ಯೂಸ್ಗಳನ್ನು ಕಿತ್ತು ತರುವ ಕೆಲಸವನ್ನು ಆಯಾ ವ್ಯಾಪ್ತಿಯ ಲೈನ್ಮನ್ಗಳು ನಿರ್ವಹಿಸುತ್ತಿದ್ದಾರೆ.
‘ಮಳೆಗಾಲದಲ್ಲಿ ವಿದ್ಯುತ್ ಸಂಪರ್ಕದಲ್ಲಿ ಪದೇ ಪದೇ ವ್ಯತ್ಯಯ ಉಂಟಾಗುವ ಸಮಸ್ಯೆ ಎದುರಾಗುತ್ತದೆ. ಈ ನಡುವೆ ವಿದ್ಯುತ್ ಬಿಲ್ ವಸೂಲಿಗೂ ಕ್ರಮವಹಿಸಬೇಕಿರುವುದರಿಂದ ಲೈನ್ಮನ್ಗಳನ್ನು ಈ ಕೆಲಸಕ್ಕೂ ನಿಯೋಜಿಸಬೇಕಾಗಿದೆ’ ಎನ್ನುತ್ತಾರೆ ಹೆಸ್ಕಾಂ ಇಂಜಿನಿಯರ್ಗಳು.
‘ಗೃಹ ಬಳಕೆದಾರರಿಗೆ ಗರಿಷ್ಠ ಮೂರು ತಿಂಗಳು ಕಾಲಾವಕಾಶ ನೀಡಲಾಗಿದೆ. ಬಿಲ್ ಪಾವತಿಸದವರ ಮನೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುತ್ತಿದೆ. ಸರ್ಕಾರಿ ಇಲಾಖೆಗಳಿಗೆ ಬಿಲ್ ಪಾವತಿಸಲು ನೊಟೀಸ್ ನೀಡಲಾಗಿದೆ’ ಎಂದು ಹೆಸ್ಕಾಂ ಶಿರಸಿ ವೃತ್ತದ ಅಧಿಕಾರಿ ತಿಳಿಸಿದರು.
‘ಕೋವಿಡ್ ಕಾರಣಕ್ಕೆ ನಿರೀಕ್ಷಿತ ಆದಾಯವಿಲ್ಲದ ಪರಿಣಾಮ ವಿದ್ಯುತ್ ಬಿಲ್ ಪಾವತಿಗೆ ವಿಳಂಬವಾಗಿದೆ. ಅಲ್ಲದೆ ಬಳಕೆಗೆ ಮೀರಿ ಹೆಚ್ಚಿನ ಮೊತ್ತದ ಬಿಲ್ ಕೂಡ ಬರುತ್ತಿದೆ. ಈ ಬಗ್ಗೆ ವಿಚಾರಿಸಿದರೆ ಹೆಸ್ಕಾಂನಿಂದ ಸೂಕ್ತ ಉತ್ತರವೂ ಸಿಕ್ಕಿಲ್ಲ. ಬಿಲ್ ಪಾವತಿಗೆ ಕಾಲಾವಕಾಶ ನೀಡಲು ಕೋರಿದರೂ ಸ್ಪಂದಿಸಲಿಲ್ಲ’ ಎಂದು ಶಿರಸಿ ತಾಲ್ಲೂಕಿನ ಗ್ರಾಮೀಣ ಭಾಗದ ಕಾರ್ಮಿಕರೊಬ್ಬರು ಬೇಸರ ತೋಡಿಕೊಂಡರು.
ಆನ್ಲೈನ್ ಪಾವತಿಗೆ ಅವಕಾಶ:
ಹೆಸ್ಕಾಂ ಕಚೇರಿಗೆ ತೆರಳಿ ಸರತಿಯಲ್ಲಿ ತಾಸುಗಟ್ಟಲೆ ನಿಂತು ವಿದ್ಯುತ್ ಬಿಲ್ ಪಾವತಿಸಲು ಜನರು ಬೇಸರಿಸಿಕೊಳ್ಳುತ್ತಿರುವುದು ಬಿಲ್ ಬಾಕಿಗೆ ಮುಖ್ಯ ಕಾರಣ ಎಂಬ ಅಭಿಪ್ರಾಯವಿದೆ.
‘ಆನ್ಲೈನ್ ಮೂಲಕ ಬಿಲ್ ಪಾವತಿಗೆ ಅವಕಾಶವಿದೆ. ಗ್ರಾಮೀಣ ಭಾಗದ ಜನರೂ ಈ ಸೌಲಭ್ಯದ ಬಳಕೆ ಮಾಡಿ ಬಿಲ್ ಪಾವತಿಸಬಹುದು. ಬಿಲ್ ಪಾವತಿಗೆ ವಿಳಂಬ ಮಾಡಿದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುತ್ತದೆ’ ಎಂದು ಹೆಸ್ಕಾಂ ಶಿರಸಿ ಎಇಇ ನಾಗರಾಜ ಪಾಟೀಲ್ ಎಚ್ಚರಿಸಿದ್ದಾರೆ.