ದಾಂಡೇಲಿ: ಇಲ್ಲಿನ ಮೌಳಂಗಿ ಇಕೋ ಪಾರ್ಕ್ ಬಳಿ ಕಾಳಿ ನದಿಯಲ್ಲಿ ಈಜಲು ಹೋಗಿ ಕೊಚ್ಚಿಕೊಂಡು ಹೋದ ಯುವಕನ ಮೃತದೇಹವು ಶುಕ್ರವಾರ ಸಮೀಪದ ಚಿಕ್ಕ ಸಂಗಮದಲ್ಲಿ ಪತ್ತೆಯಾಗಿದೆ.
ಹುಬ್ಬಳ್ಳಿಯ ‘104’ ಸಹಾಯವಾಣಿಯಲ್ಲಿ ಕೆಲಸ ಮಾಡುವ ಆರು ಜನ, ದಾಂಡೇಲಿಗೆ ಕೋವಿಡ್ ಮುನ್ನೆಚ್ಚರಿಕೆಯ ಪ್ರಚಾರಕ್ಕಾಗಿ ಬಂದಿದ್ದರು. ಅವರಲ್ಲಿ ಹುಬ್ಬಳ್ಳಿ ಶೀಲಾ ಕಾಲೊನಿ ನಿವಾಸಿ ಆನಂದ ಸಿಂಗ್ ಲಕ್ಷ್ಮಣ ಸಿಂಗ್ (32) ಎಂಬುವವರು ಕಾಳಿ ನದಿಯಲ್ಲಿ ಈಜಾಟದಲ್ಲಿ ತೊಡಗಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದರು. ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದರು.
ದಾಂಡೇಲಿ ಮಾನಸಾ ಅಡ್ವೆಂಚರ್ ತಂಡ ಹಾಗೂ ಜೊಯಿಡಾ ಅಗ್ನಿಶಾಮಕ ದಳದ ಸಿಬ್ಬಂದಿ ಸತತ ಎರಡು ದಿನ ಶೋಧ ಕಾರ್ಯ ನಡೆಸಿ ಮೃತದೇಹವನ್ನು ಪತ್ತೆ ಮಾಡಿದ್ದಾರೆ. ಯುವಕನ ಶವವನ್ನು ದಾಂಡೇಲಿ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಕ್ಕೆ ಒಪ್ಪಿಸಲಾಗಿದೆ. ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಿ.ವೈ.ಎಸ್.ಪಿ ಕೆ.ಎಲ್.ಗಣೇಶ, ಸಿ.ಪಿ.ಐ ಪ್ರಭು ಗಂಗನಹಳ್ಳಿ, ಗ್ರಾಮೀಣ ಠಾಣೆ ಪಿ.ಎಸ್.ಐ ಐ.ಆರ್.ಗಡ್ಡೇಕರ, ಯಲ್ಲಾಲಿಂಗ ಕೊಣ್ಣೂರು ಹಾಗೂ ಇತರ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.