ಶಿರಸಿ: ತಾಲ್ಲೂಕಿನ ಕೊರ್ಲಕಟ್ಟಾ ಗ್ರಾಮದಲ್ಲಿದ್ದ ಎಸ್.ಆರ್.ಎಲ್. ಹೆಸರಿನ ಬೇಕರಿಗೆ ಶುಕ್ರವಾರ ನಸುಕಿನ ಜಾವ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ವಸ್ತು, ಯಂತ್ರೋಪಕರಣಗಳು ನಾಶವಾಗಿವೆ.
ಮಾಳಂಜಿ ಗ್ರಾಮದ ಮಾಂತೇಶ ನಾಯ್ಕ ಎಂಬುವವರಿಗೆ ಸೇರಿದ ಬೇಕರಿ ಇದಾಗಿದ್ದು, ವಿದ್ಯುತ್ ಶಾರ್ಟ್ ಸರ್ಕೀಟ್ನಿಂದ ಬೆಂಕಿ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಬೆಂಕಿಯ ಶಾಖಕ್ಕೆ ಬೇಕರಿಯಲ್ಲಿದ್ದ ಸಿಲಿಂಡರ್ ಕೂಡ ಸ್ಫೋಟಗೊಂಡಿದ್ದು ಹಾನಿ ಪ್ರಮಾಣ ಹೆಚ್ಚಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ಆರಿಸಿದರು.
‘ಬೇಕರಿ ಉತ್ಪನ್ನ ಸಿದ್ಧಪಡಿಸಲು ಬಳಸುವ ಉಪಕರಣಗಳು, ತಿನಿಸುಗಳು, ನಗದು ಸೇರಿ ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ. ಸಾಲ ಮಾಡಿ ಬೇಕರಿ ನಿರ್ಮಿಸಿದ್ದೆ. ಕುಟುಂಬ ನಿರ್ವಹಣೆಗೆ ಇದೇ ಆಧಾರವಾಗಿತ್ತು’ ಎಂದು ಮಾಂತೇಶ ಅಳಲು ತೋಡಿಕೊಂಡಿದ್ದಾರೆ.