ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಹ ಪರಿಸ್ಥಿತಿ ಅರಿಯಲು ತಂತ್ರಾಂಶ; ಜಿಲ್ಲಾಡಳಿತದಿಂದ ಸರ್ಕಾರಕ್ಕೆ ಪ್ರಸ್ತಾವ

ವೈಜ್ಞಾನಿಕ, ನಿಖರ ಮುನ್ಸೂಚನೆ ಪಡೆಯಲು ಕ್ರಮ:
Last Updated 26 ಆಗಸ್ಟ್ 2021, 12:15 IST
ಅಕ್ಷರ ಗಾತ್ರ

ಕಾರವಾರ: ‘ಜಿಲ್ಲೆಯು ಪದೇ ಪದೇ ಪ್ರವಾಹದಂಥ ಪ್ರಾಕೃತಿಕ ವಿಕೋಪಗಳಿಗೆ ಗುರಿಯಾಗುತ್ತಿದೆ. ಪ್ರವಾಹ ಬರುವ ಸಂದರ್ಭದಲ್ಲಿ ಸಾರ್ವಜನಿಕರಿಗೆ ನಿಖರವಾದ ಮಾಹಿತಿ, ಸೂಚನೆಗಳನ್ನು ನೀಡಲು ತಂತ್ರಾಂಶವೊಂದನ್ನು ಅಭಿವೃದ್ಧಿ ಪಡಿಸಲು ಚಿಂತಿಸಲಾಗಿದೆ. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಪ್ರಾಕೃತಿಕ ವಿಕೋಪಗಳ ನಿರ್ವಹಣೆಗೆ ಕೇಂದ್ರೀಕೃತ ವ್ಯವಸ್ಥೆಯೊಂದನ್ನು ಜಾರಿಗೊಳಿಸಲಾಗುವುದು. ನೆರೆ ಪೀಡಿತ ಪ್ರದೇಶಗಳನ್ನು ಗುರುತಿಸಿ, ಯಾವ ಕಾರಣಗಳಿಂದ ಪ್ರವಾಹ ಆಗಲಿದೆ, ಎಷ್ಟು ಸಮಯದಲ್ಲಿ ಹಾಗೂ ಯಾವ ಮಟ್ಟದಲ್ಲಿ ಆಗಲಿದೆ ಎಂದು ಸಾಕಷ್ಟು ಮೊದಲೇ ವೈಜ್ಞಾನಿಕ ಕ್ರಮದಿಂದ ತಿಳಿಯಲು ಸಾಧ್ಯವಿದೆ. ಜೊತೆಗೇ ಆ ‍ಪ್ರದೇಶಗಳ ಜನರನ್ನು ಸುರಕ್ಷಿತವಾಗಿ ತೆರವು ಮಾಡಬಹುದು. ಮುಂದಿನ ಮಳೆಗಾಲಕ್ಕೂ ಮೊದಲು ಜಾರಿಗೆ ತರಲು ಪ್ರಯತ್ನಿಸಲಾಗುವುದು’ ಎಂದು ಹೇಳಿದರು.

‘ಅಣಶಿ ಘಟ್ಟದಲ್ಲಿ ಹೆದ್ದಾರಿಯಿಂದ ಮಣ್ಣನ್ನು ಸ್ಥಳೀಯರು ತೆರವು ಮಾಡಿದ್ದಾರೆ. ಅವರ ಶ್ರಮದಾನ ಶ್ಲಾಘನೀಯ. ಆ ಭಾಗದಲ್ಲಿ ಮಣ್ಣಿನ ಧಾರಣಾ ಸಾಮರ್ಥ್ಯದ ಬಗ್ಗೆ ಅಧ್ಯಯನ ಆಗಬೇಕಿದೆ. ಹುಬ್ಬಳ್ಳಿಯ ಬಿ.ವಿ.ಬಿ ಎಂಜಿನಿಯರಿಂಗ್ ಕಾಲೇಜು ಮತ್ತು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ತಜ್ಞರ ತಂಡಗಳು ಪರಿಶೀಲನೆ ಮಾಡಿವೆ. ಆ.29ರ ವೇಳೆಗೆ ಅವರ ವರದಿಗಳು ಸಲ್ಲಿಕೆಯಾಗುವ ನಿರೀಕ್ಷೆಯಿದೆ’ ಎಂದು ತಿಳಿಸಿದರು.

ಲಸಿಕೆಗೆ ಉತ್ತಮ ಸ್ಪಂದನ:

‘ಉತ್ತರ ಕನ್ನಡದಲ್ಲಿ ಕೋವಿಡ್ ನಿಯಂತ್ರಣದಲ್ಲಿದೆ. ಪ್ರವಾಸಿ ತಾಣಗಳು, ಸಾರ್ವಜನಿಕರು ಹೆಚ್ಚು ಬಂದು ಹೋಗುವ ಸ್ಥಳಗಳಲ್ಲಿ ಒಂದು ವಾರ, 10 ದಿನಗಳಿಗೊಮ್ಮೆ ಸ್ಥಳೀಯರ ಗಂಟಲು ದ್ರವದ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಜಿಲ್ಲೆಯಲ್ಲಿ ಸದ್ಯ ಸೋಂಕು ದೃಢಪಡುವ ಪ್ರಮಾಣವು ಶೇ 1ಕ್ಕಿಂತ ಕಡಿಮೆಯಿದೆ’ ಎಂದರು.

‘ಲಸಿಕಾ ಅಭಿಯಾನಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಇದೆ. ಜಿಲ್ಲೆಯಲ್ಲಿ 10.24 ಲಕ್ಷ ಜನರಿಗೆ ಲಸಿಕಾ ಗುರಿ ಹೊಂದಲಾಗಿದೆ. ಈಗಾಗಲೇ ಸುಮಾರು 6 ಲಕ್ಷ ಮಂದಿ ಕನಿಷ್ಠ ಒಂದು ಡೋಸ್ ಪಡೆದುಕೊಂಡಿದ್ದಾರೆ. ಕಾರವಾರ ತಾಲ್ಲೂಕಿನಲ್ಲಿ ಶೇ 91ರಷ್ಟು ಪ್ರಗತಿಯಾಗಿದೆ’ ಎಂದು ಅಂಕಿ ಅಂಶ ತಿಳಿಸಿದರು.

ಪ್ರತ್ಯೇಕ ವೆಬ್ ಪೋರ್ಟಲ್:

‘ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ವೆಬ್ ಪೋರ್ಟಲ್ ಸಿದ್ಧಪಡಿಸಲು ತೀರ್ಮಾನಿಸಲಾಗಿದೆ. ಅದಕ್ಕೆ ಸಂಬಂಧಿಸಿ ಜಿಲ್ಲೆಯ ಸಂಸ್ಕೃತಿ, ವನ್ಯಜೀವಿ, ಕಡಲತೀರಗಳು, ಜನಜೀವನ, ಈ ರೀತಿ ಏಳೆಂಟು ವಿಭಾಗಗಳ ಸಮಗ್ರ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ತಜ್ಞರ ಮೂಲಕ ವಿಷಯಗಳನ್ನು ಸಿದ್ಧಪಡಿಸಿಕೊಂಡು ವೆಬ್‌ಸೈಟ್ ಲೋಕಾರ್ಪಣೆ ಮಾಡಲಾಗುವುದು’ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾಹಿತಿ ನೀಡಿದರು.

‘ಕಾಳಿ ನದಿಯಲ್ಲಿ ಸಮುದ್ರ ವಿಮಾನ (ಸೀ ಪ್ಲೇನ್) ಸಂಚಾರದ ಬಗ್ಗೆ ಸರ್ಕಾರದಿಂದಲೇ ಪ್ರಸ್ತಾಪವಿದೆ. ಅಲ್ಲದೇ ನದಿಗಳ ಅಳಿವೆಗಳಲ್ಲಿ ಜಲ ಸಾರಿಗೆ ಮೂಲಕ ಸಂಚರಿಸುವ ಬಗ್ಗೆಯೂ ಯೋಚನೆಯಿದೆ’ ಎಂದು ಹೇಳಿದರು.

–––––

* ಕಾಸರಕೋಡು ಕಡಲತೀರಕ್ಕೆ ಬ್ಲೂ ಫ್ಲ್ಯಾಗ್ ರಾಷ್ಟ್ರೀಯ ತೀರ್ಪುಗಾರರ ಸಮಿತಿಯಲ್ಲಿ ಪ್ರಮಾಣ ಪತ್ರವು ಪುನಃ ಸಿಕ್ಕಿದೆ. ಅಂತರರಾಷ್ಟ್ರೀಯ ಸಮಿತಿಯಲ್ಲೂ ಸಿಗುವ ವಿಶ್ವಾಸವಿದೆ.

– ಮುಲ್ಲೈ ಮುಗಿಲನ್, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT