ಮಧ್ಯಾಹ್ನ 2.30ರ ಸುಮಾರಿಗೆ ಸುರಿದ ಭಾರಿ ಗಾಳಿ, ಮಳೆ ಮತದಾನಕ್ಕೆ ಅಡ್ಡಿಯುಂಟುಮಾಡಿತು. ಗುಡುಗು–ಸಿಡಿಲಿನ ಆರ್ಭಟಕ್ಕೆ ಜನರು ಮನೆಯಿಂದ ಹೊರ ಬರಲು ಹಿಂದೇಟು ಹಾಕಿದರು. ಮಳೆಯ ಅಬ್ಬರಕ್ಕೆ ಮಾರಿಕಾಂಬಾ ಕಾಲೇಜಿನ ಮಸ್ಟರಿಂಗ್ ಸೆಂಟರ್ ಆವರಣದ ಸಖಿ ಮತಗಟ್ಟೆ ಎದುರಿನ ಶಾಮಿಯಾನ, ಅಲ್ಲಿದ್ದ ಮಕ್ಕಳ ಆಟಿಕೆಗಳು , ಮತಗಟ್ಟೆ ಸಿಬ್ಬಂದಿ ಕುಳಿತುಕೊಳ್ಳಲು ಹಾಕಿದ್ದ ಕುರ್ಚಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಕಾರವಾರ ಹೊರತುಪಡಿಸಿ ಉತ್ತರ ಕನ್ನಡ ಜಿಲ್ಲೆಯ ಇನ್ನುಳಿದ ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲಾ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ, ಹಳಿಯಾಳ, ಜೊಯಿಡಾ ತಾಲ್ಲೂಕುಗಳಲ್ಲಿ ಮಧ್ಯಾಹ್ನ ಮಳೆ ಸುರಿದ ಪರಿಣಾಮ ಒಂದು ತಾಸು ಮತದಾನ ಮಂದಗತಿಯಲ್ಲಿ ಸಾಗಿತು.