ಕಾರವಾರ: ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ವರ್ತಿಕಾ ಕಟಿಯಾರ್ ಅವರನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಬುಧವಾರ ಆದೇಶಿಸಿದೆ. ಪ್ರಸ್ತುತ ಹುದ್ದೆಯಲ್ಲಿರುವ ಶಿವಪ್ರಕಾಶ ದೇವರಾಜು ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದ್ದು, ಸ್ಥಳ ಸೂಚಿಸಿಲ್ಲ.
2010ರ ಐ.ಪಿ.ಎಸ್ ಬ್ಯಾಚ್ ಅಧಿಕಾರಿಯಾಗಿರುವ ವರ್ತಿಕಾ, ಪ್ರಸ್ತುತ ಬೆಂಗಳೂರಿನ ರಾಜ್ಯ ಅಪರಾಧ ದಾಖಲೆಗಳ ಬ್ಯುರೊದ ಎಸ್.ಪಿ.ಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ವರ್ಗಾವಣೆಯೊಂದಿಗೆ ಅವರು ಉತ್ತರ ಕನ್ನಡ ಮೊದಲ ಮಹಿಳಾ ಪೊಲೀಸ್ ವರಿಷ್ಠಾಧಿಕಾರಿ ಆಗಲಿದ್ದಾರೆ.
2019ರ ಆ.19ರಂದು ಜಿಲ್ಲೆಗೆ ವರ್ಗಾವಣೆಯಾಗಿದ್ದ ಶಿವಪ್ರಕಾಶ ದೇವರಾಜು, ಜಿಲ್ಲೆಯಲ್ಲಿ ಕೋವಿಡ್ ಲಾಕ್ಡೌನ್ ಸಂದರ್ಭವನ್ನು ಯಶಸ್ವಿಯಾಗಿ ನಿಭಾಯಿಸಿದ್ದರು. ಜನರ ಅನಗತ್ಯ ಸಂಚಾರವನ್ನು ತಡೆಯಲು ಕೈಗೊಂಡ ಕ್ರಮಗಳ ಬಗ್ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು.
ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಪತ್ತೆ ಹಚ್ಚುವ ಸಲುವಾಗಿ ತಂತ್ರಜ್ಞಾನದ ನೆರವು ಪಡೆದು ಯಶಸ್ವಿಯಾಗಿದ್ದರು. ಈ ಮೂಲಕ ಹಲವು ಜಟಿಲ ಪ್ರಕರಣಗಳನ್ನು ಬಿಡಿಸಿದ ಹೆಗ್ಗಳಿಕೆ ಅವರದ್ದು. ಅಲ್ಲದೇ ಮಾದಕ ವಸ್ತುಗಳ ಸಾಗಣೆ ಆರೋಪಿಗಳ ಬಂಧಿಸಲು ವಿಶೇಷ ಕಾರ್ಯಾಚರಣೆ ನಡೆಸಿ ಗಮನ ಸೆಳೆದಿದ್ದರು.