ಶಿರಸಿ: ಕಾರವಾರ-ಜೋಯಿಡಾ ಶಾಸಕರಾಗಿದ್ದ ವಸಂತ ಅಸ್ನೋಟಿಕರ್ ಅವರನ್ನು ಗುಂಡಿಟ್ಟು ಹತ್ಯೆ ಮಾಡಿದ್ದ ಮುಂಬೈ ಮೂಲದ ಶಾರ್ಪ್ ಶೂಟರ್ ಸಂಜಯ ಮೋಹಿತೆಗೆ ಜೀವಾವಧಿ ಶಿಕ್ಷೆ ಹಾಗೂ ₹68 ಸಾವಿರ ದಂಡ ವಿಧಿಸಿ ಇಲ್ಲಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
2000ನೇ ಇಸವಿಯ ಫೆ.19 ರಂದು ಕಾರವಾರ ನಗರದ ದೈವಜ್ಞ ಭವನದ ಎದುರು ಶಾಸಕ ವಸಂತ ಹತ್ಯೆ ನಡೆದಿತ್ತು. ಪ್ರಕರಣದ ಇನ್ನಿತರ ಆರೋಪಿಗಳಾಗಿದ್ದ ದಿಲೀಪ ನಾಯ್ಕ 2004ರಲ್ಲಿ ಹತ್ಯೆ ಆಗಿದ್ದರು. ಉಳಿದ ಆರೋಪಿಗಳಾದ ಬಾಬು, ಅಂತೋನಿಯನ್ನು ಮುಂಬೈ ಪೊಲೀಸರು ಎನ್ ಕೌಂಟರ್ ಮಾಡಿದ್ದರು.
ಪ್ರಕರಣದ ತನಿಖೆ ನಡೆಸಿದ್ದ ಅಪರಾಧ ತನಿಖಾ ದಳ (ಸಿಐಡಿ) ದೋಷಾರೋಪಣ ಪಟ್ಟಿ ಸಲ್ಲಿಸಿತ್ತು. ವಿಚಾರಣೆ ನಡೆಸಿದ ನ್ಯಾಯಾಧೀಶ ಶಾಂತವೀರ ಶಿವಪ್ಪ ಅಪರಾಧಿಗೆ ಶಿಕ್ಷೆ ಪ್ರಮಾಣ ಪ್ರಕಟಿಸಿದರು. ಸರ್ಕಾರಿ ಅಭಿಯೋಜಕಿ ಸುನಂದಾ ಮಡಿವಾಳರ ವಾದ ಮಂಡಿಸಿದ್ದರು.