ಶಿರಸಿ: ರೋಗರಹಿತವಾದ ಆರೋಗ್ಯಕರ ಟೊಮೆಟೊ ಬೆಳೆಸುವ ನಿಟ್ಟಿನಲ್ಲಿ ಸಂಶೋಧನಾ ವಿದ್ಯಾರ್ಥಿನಿಯೊಬ್ಬರು ಚೆರ್ರಿ ಟೊಮೆಟೊ ಮೇಲೆ ಈ ಪ್ರಯೋಗ ಕೈಗೊಂಡಿದ್ದಾರೆ.
ಇಲ್ಲಿನ ತೋಟಗಾರಿಕಾ ಕಾಲೇಜಿಗೆ ತರಕಾರಿ ವಿಜ್ಞಾನದ ಮೇಲೆ ಅಧ್ಯಯನಕ್ಕೆ ಬಂದಿರುವ ಎಂ.ಎಸ್ಸಿ ವಿದ್ಯಾರ್ಥಿನಿ ಸನ್ಮತಿ ಅವರು, ಕಾಡು ಬದನೆ, ಕಾಡು ಟೊಮೆಟೊ ಮೇಲೆ ಚೆರ್ರಿ ಟೊಮೊಟೊ ಬೆಳೆಸಿದ್ದಾರೆ. ಗುಣಮಟ್ಟದ ಹಣ್ಣು, ಅಧಿಕ ಇಳುವರಿ ಪಡೆಯುವುದು ಅವರ ಸಂಶೋಧನೆಯ ಪ್ರಮುಖ ಭಾಗವಾಗಿದೆ.
‘ಕಲುಷಿತ ಮಣ್ಣು ಹಾಗೂ ನೀರಿನ ಸಮಸ್ಯೆಯಿಂದ ತರಕಾರಿ ಬೆಳೆ ಕಷ್ಟವಾಗಿದೆ. ಹೂ ಬಿಡುವ ಹಂತದಲ್ಲೇ ಗಿಡಗಳು ಸಾಯುತ್ತವೆ. ನಿರಂತರ ಔಷಧ ಸಿಂಪರಣೆ ಮಾಡಿದರೆ ಅದನ್ನು ಸೇವಿಸುವ ಮನುಷ್ಯನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಬಹುದು. ಹೀಗಾಗಿ, ರೋಗನಿರೋಧಕ ಶಕ್ತಿಯಿರುವ ತಳಿಗಳನ್ನು ಆಯ್ಕೆ ಮಾಡಿಕೊಂಡು ಕಸಿ ಕಟ್ಟಿ, ಒಳ್ಳೆಯ ತರಕಾರಿ ಪಡೆಯಬಹುದು’ ಎನ್ನುತ್ತಾರೆ ವಿದ್ಯಾರ್ಥಿನಿಗೆ ಮಾರ್ಗದರ್ಶನ ಮಾಡುತ್ತಿರುವ ತರಕಾರಿ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ.ಶಿವಾನಂದ ಹೊಂಗಲ್.
‘ಕಾಡು ಬದನೆಗೆ ರೋಗ ಕಡಿಮೆ. ಕಾಡು ಬದನೆ ಗಿಡಗಳನ್ನು ಬೆಳೆಸಿಕೊಂಡು, ಅದರ ಮೇಲೆ ಟೊಮೆಟೊ ಅಥವಾ ಇನ್ನಾವುದೇ ತರಕಾರಿ ಬೆಳೆಸಬಹುದು. ಸಂರಕ್ಷಿತ ಬೇಸಾಯದಲ್ಲಿ ಸಾಮಾನ್ಯವಾಗಿ ಒಂದು ಟೊಮೆಟೊ ಗಿಡ ನಾಲ್ಕೈದು ತಿಂಗಳು ಫಲ ನೀಡುತ್ತದೆ. ಈ ರೀತಿ ಕಸಿ ಮಾಡುವುದರಿಂದ 10 ತಿಂಗಳವರೆಗೆ ಇಳುವರಿ ಪಡೆಯಲು ಸಾಧ್ಯವಿದೆ. ಇಸ್ರೇಲ್, ಜಪಾನ್ ಮೊದಲಾದ ದೇಶಗಳಲ್ಲಿ ಶೇ 99ರಷ್ಟು ತರಕಾರಿ ಬೆಳೆಯನ್ನು ಇದೇ ಮಾದರಿಯಲ್ಲಿ ಬೆಳೆಯುತ್ತಾರೆ’ ಎನ್ನುತ್ತಾರೆ ಅವರು.
‘ಸಾಮಾನ್ಯ ಕಸಿ ಗಿಡಗಳು ಹೆಚ್ಚು ನೀರು ಬಯಸುತ್ತವೆ. ಆದರೆ, ಬದನೆ ಮೇಲೆ ಕಸಿ ಮಾಡಿರುವ ಟೊಮೆಟೊ ಗಿಡಗಳಿಗೆ ಕಡಿಮೆ ನೀರು ಸಾಕು. ವಿವಿಧ ಜಾತಿಯ ಬದನೆ, ಕಾಡು ಟೊಮೆಟೊ ಮೇಲೆ ಚೆರ್ರಿ ಟೊಮೆಟೊ ಬೆಳೆಸಿರುವುದು ಈ ಭಾಗದಲ್ಲಿ ಇದೇ ಮೊದಲ ಪ್ರಯೋಗವಾಗಿದೆ’ ಎಂದು ಸನ್ಮತಿ ಹೇಳಿದರು.