ಶಿರಸಿ: ಕಳೆದ ಒಂದು ವಾರದಲ್ಲಿ ಇಲ್ಲಿನ ಕೆಎಚ್ಬಿ ಕಾಲೊನಿಯಲ್ಲಿ ನಾಲ್ಕು ಆಕಳುಗಳು ನಿಗೂಢವಾಗಿ ಸಾವು ಕಂಡಿವೆ. ಬುಧವಾರ ಬೆಳಿಗ್ಗೆ ಇನ್ನೊಂದು ಆಕಳು ಅಸ್ವಸ್ಥಗೊಂಡಿದೆ. ಪಶುವೈದ್ಯರು ಚಿಕಿತ್ಸೆ ನೀಡಿದ್ದಾರೆ.
ಆಕಳುಗಳ ಸಾವಿಗೆ ನಿಖರ ಕಾರಣ ಇನ್ನಷ್ಟೇ ಗೊತ್ತಾಗಬೇಕಾಗಿದೆ. ಯಾವುದಾದರೂ ವೈರಸ್ ಕಾಯಿಲೆ ಇರಬಹದೆಂದು ಕೆಲವರು ಶಂಕೆ ವ್ಯಕ್ತಪಡಿಸಿದರೆ, ಇನ್ನು ಕೆಲವರು ಹಳಸಿದ ಆಹಾರ ಸೇವನೆಯಿಂದ ಮೃತಪಟ್ಟಿರಬಹುದೆಂದು ಸಂದೇಹ ವ್ಯಕ್ತಪಡಿಸಿದ್ದಾರೆ.
‘ಆಹಾರ ದೋಷದಿಂದ ಆಕಳು ಅನಾರೋಗ್ಯಕ್ಕೆ ತುತ್ತಾಗಿದೆ. ಹಿಂದೆ ಸತ್ತಿರುವ ಆಕಳುಗಳ ಬಗ್ಗೆ ಮಾಹಿತಿಯಿಲ್ಲ’ ಎಂದು ಡಾ.ಆರ್.ಜಿ.ಹೆಗಡೆ ಹೇಳಿದರು.
‘ಆಕಳುಗಳ ಸಾವಿನ ಕಾರಣ ಗೊತ್ತಾಗಬೇಕು. ಇದರಿಂದ ಜನರ ಆತಂಕವೂ ದೂರವಾಗಬೇಕು’ ಎಂದು ನಗರಸಭೆ ಸದಸ್ಯ ಶ್ರೀಕಾಂತ ಬಳ್ಳಾರಿ ವೈದ್ಯಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.