ಕಾರವಾರ: ಹಲವು ವರ್ಷಗಳಿಂದ ಪಾಳು ಬಿದ್ದಿದ್ದ ತಾಲ್ಲೂಕಿನಕೃಷಿ ಜಮೀನುಗಳಲ್ಲಿ ಈಗ ‘ಇಸ್ರೇಲ್ ಮಾದರಿ’ಯ ಕೃಷಿ ಫಲ ನೀಡುತ್ತಿದೆ. ಇದರ ಫಲವಾಗಿ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಈ ಬಾರಿ 2 ಸಾವಿರ ಟನ್ಗೂ ಅಧಿಕ ಕಲ್ಲಂಗಡಿ ಹಣ್ಣು ವಿವಿಧ ರಾಜ್ಯಗಳಿಗೆ ರವಾನೆಯಾಗಿದೆ.
ಮುಡಗೇರಿ, ಉಳಗಾ, ಭೈರೆ ಭಾಗದಲ್ಲಿ 200 ಹೆಕ್ಟೇರ್ಗೂ ಅಧಿಕ ಜಮೀನಿನಲ್ಲಿ ರೈತರು ಕಲ್ಲಂಗಡಿ ಬೆಳೆಯುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಸಿಗುತ್ತಿರುವ ಉತ್ತಮ ದರದಿಂದ ಪ್ರೇರೇಪಿತರಾಗಿ ಬೇರೆಯವರ ಜಮೀನನ್ನು ಗೇಣಿಗೆ ಪಡೆದು ಕೃಷಿ ಮಾಡುವವರೂ ಇದ್ದಾರೆ.
ಕಲ್ಲಂಗಡಿ ಬೆಳೆಯುವ ಗದ್ದೆಯನ್ನು ಉಳುಮೆ ಮಾಡಿದನಂತರಕೊಟ್ಟಿಗೆಗೊಬ್ಬರ ಹರಡಲಾಗಿದೆ. ಬಳಿಕ ಸಸಿ ಮಡಿಯನ್ನು ಸಿದ್ಧ ಪಡಿಸಿ ಒಂದು ಅಡಿಗೆ ಒಂದರಂತೆ ಹನಿ ನೀರಾವರಿಯ ಪೈಪ್ ಅಳವಡಿಸಲಾಗಿದೆ. ಬಿತ್ತನೆ ಬೀಜವನ್ನು ನಾಟಿ ಮಾಡಿದ ಬಳಿಕ ಮಡಿಗೆಪ್ಲಾಸ್ಟಿಕ್ ಹಾಳೆಯನ್ನು ಮುಚ್ಚಲಾಗಿದೆ.
ಕಲ್ಲಂಗಡಿ ಗಿಡ ಬೆಳೆಯಲು ಮೂರರಿಂದನಾಲ್ಕುಸೆಂಟಿಮೀಟರ್ ಗಾತ್ರದ ರಂಧ್ರಗಳನ್ನು ಮಾಡಲಾಗಿದೆ. ಅದರ ಮೂಲಕ ಎರಡು ದಿನಗಳಿಗೆ ಒಮ್ಮೆಮುಕ್ಕಾಲು ಗಂಟೆ ನೀರು ಹರಿಸಿದರೆ ಸಾಕಾಗುತ್ತದೆ. ಇದರಿಂದ ಮಣ್ಣಿನಲ್ಲಿ ತೇವಾಂಶ ಉಳಿದು ಎರಡು ತಿಂಗಳಲ್ಲಿ 5ರಿಂದ 10 ಕೆ.ಜಿ ಗಾತ್ರದ ಕಲ್ಲಂಗಡಿ ಹಣ್ಣುಗಳು ಕಟಾವಿಗೆ ಸಿಗುತ್ತವೆ.
ಈ ರೀತಿಯ ಕೃಷಿ ಮಾಡುತ್ತಿರುವಮುಡಗೇರಿಯ ಅನಿಲ ದೇಸಾಯಿ, ಈ ಹಿಂದೆ ಗೋವಾದಲ್ಲಿ ಉದ್ಯಮಿಯಾಗಿದ್ದರು. ಆದರೆ, ಈ ಕೃಷಿಯ ಬಗ್ಗೆ ಆಸಕ್ತಿ ತಳೆದು ಐದು ವರ್ಷಗಳಿಂದತಮ್ಮಐದು ಎಕರೆ ಜಮೀನಿನಲ್ಲಿ ಕಲ್ಲಂಗಡಿ ಬೆಳೆಯುತ್ತಿದ್ದಾರೆ. ವರ್ಷಕ್ಕೆರಡು ಬಾರಿ ಕಲ್ಲಂಗಡಿ ಬೆಳೆ ತೆಗೆಯುತ್ತಿದ್ದಾರೆ.
‘ಐದು ಎಕರೆಗೆ ಒಂದೇ ಬಾರಿಗೆ ₹ 3 ಲಕ್ಷದಿಂದ ₹ 4 ಲಕ್ಷಹೂಡಿಕೆ ಬೇಕು. ಆದರೆ, ಕಾಳಜಿಯಿಂದ ನೋಡಿಕೊಂಡರೆ ಕೃಷಿಯಲ್ಲಿ ನಷ್ಟವಿಲ್ಲ’ ಎಂದು ಅವರು ಹೇಳುತ್ತಾರೆ.
ನೀರಾವರಿಯಲ್ಲೇ ಗೊಬ್ಬರ:ಈ ಮಾದರಿಯ ಕೃಷಿಯಲ್ಲಿ ಗಿಡಗಳಿಗೆ ತಿಂಗಳಿಗೆ ಎರಡು ಬಾರಿ ಗೊಬ್ಬರವನ್ನೂ ನೀರಾವರಿ ವ್ಯವಸ್ಥೆಯ ಮೂಲಕವೇ ನೀಡಲಾಗುತ್ತದೆ. ಇದರಿಂದ ನೀರಿನ ಉಳಿತಾಯ ಹಾಗೂ ಕಾಡು ಗಿಡಗಳು ಬೆಳೆಯುವ ಸಮಸ್ಯೆ ಎದುರಾಗುವುದಿಲ್ಲ. ಜೊಗೇ ಕಾರ್ಮಿಕರ ವೆಚ್ಚವೂ ಗಣನೀಯವಾಗಿ ಕಡಿಮೆಯಾಗುತ್ತದೆ ಎನ್ನುತ್ತಾರೆ ಬೆಳೆಗಾರರು.
ಹೊರ ರಾಜ್ಯಗಳಲ್ಲಿ ಮಾರುಕಟ್ಟೆ: ಕಾರವಾರ ತಾಲ್ಲೂಕಿನವಿವಿಧ ಗ್ರಾಮಗಳಲ್ಲಿ ಬೆಳೆದಕಲ್ಲಂಗಡಿಗೆ ಹೊರರಾಜ್ಯಗಳು ಮತ್ತು ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಭಾರಿ ಬೇಡಿಕೆಯಿದೆ.
ಕೇರಳ ಹಾಗೂ ತಮಿಳುನಾಡು ರಾಜ್ಯದ ವಿವಿಧ ಜಿಲ್ಲೆಗಳಿಗೆ ಇಲ್ಲಿಂದ ರವಾನೆಯಾಗುತ್ತದೆ. ಮೂರು ಕೆ.ಜಿ.ಗಿಂತ ಹೆಚ್ಚು ತೂಕವಿರುವ ಹಣ್ಣನ್ನು ‘ಎ ಗ್ರೇಡ್’ ಎಂದು ಪರಿಗಣಿಸಲಾಗುತ್ತದೆ. ಅದಕ್ಕಿಂತ ಕಡಿಮೆ ಇರುವ ಹಣ್ಣುಗಳನ್ನು ‘ಬಿ’ ಮತ್ತು ‘ಸಿ’ ಎಂದು ಗುರುತಿಸಲಾಗುತ್ತದೆ. ಅವುಗಳ ಗ್ರೇಡ್ಗೆ ಅನುಸಾರವಾಗಿ ದರ ನಿಗದಿಯಾಗುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.