ಶಿರಸಿ: ಅಂಬಗ್ರಿಸ್ ಸಾಗಾಟ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕಿನ ಕುಡಲ ಗ್ರಾಮದ ಸಾಮಾಜಿಕ ಕಾರ್ಯಕರ್ತೆ ಅನ್ನಪೂರ್ಣ ಶಿವಪ್ಪ ಪಾರಶೆಟ್ಟಿ (35) ಎಂಬುವವರನ್ನು ಹೊಸ ಮಾರುಕಟ್ಟೆ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಕಳೆದ ಅ.25 ರಂದು ಇಲ್ಲಿನ ಹೊಸಮಾರುಕಟ್ಟೆ ಠಾಣೆ ಪೊಲೀಸರು ₹5 ಕೋಟಿ ಮೌಲ್ಯದ ಅಂಬಗ್ರಿಸ್ (ತಿಮಿಂಗಿಲ ವಾಂತಿ) ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದ್ದರು. ಆರೋಪಿಗಳಿಗೆ ಅಂಬಗ್ರಿಸ್ ನೀಡಿದ್ದ ಮಹಿಳೆ ನಾಪತ್ತೆಯಾಗಿದ್ದರು.
‘ಮೂರನೆ ಆರೋಪಿಯಾಗಿರುವ ಅನ್ನಪೂರ್ಣ ಬಂಧನಕ್ಕೆ ನಿರಂತರ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಹಾನಗಲ್ ತಾಲ್ಲೂಕು ಹಿರೇಹುಲ್ಲಾಳದಲ್ಲಿ ಆರೋಪಿಯನ್ನು ಬಂಧಿಸಿದ್ದೇವೆ’ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು 15 ದಿನಗಳ ನ್ಯಾಯಾಂಗ ವಶಕ್ಕೆ ನೀಡಲಾಗಿದೆ.