ಶಿರಸಿ: ಅಡುಗೆ ಅನಿಲ ದರವನ್ನು ₹25 ಹೆಚ್ಚಳ ಮಾಡುವ ಮೂಲಕ ಕೇಂದ್ರ ಸರ್ಕಾರ ಜನಸಾಮಾನ್ಯರ ವಿರೋಧಿ ಎಂಬುದನ್ನು ಮತ್ತೆ ಸಾಬೀತುಪಡಿಸಿದೆ ಎಂದು ಮಹಿಳಾ ಕಾಂಗ್ರೆಸ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಜ್ಯೋತಿ ಪಾಟೀಲ ಆರೋಪಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ದಿನ ಬಳಕೆ ವಸ್ತುಗಳ ಬೆಲೆ ನಿರಂತರ ಏರಿಕೆಯಾಗುತ್ತಿದೆ. ತೈಲಬೆಲೆ ಹೆಚ್ಚಳದಿಂದ ಈಗಾಗಲೆ ಕಂಗಾಲಾಗಿದ್ದ ಜನ ಸಿಲಿಂಡರ್ ಬೆಲೆ ಹೆಚ್ಚಳದಿಂದ ನಿತ್ಯ ಪರದಾಡುವಂತಾಗಿದೆ’ ಎಂದಿದ್ದಾರೆ.
‘ಬಿಜೆಪಿಗೆ ಬಡವರು, ಮಧ್ಯಮವರ್ಗದವರ ಕಾಳಜಿ ಬೇಕಿಲ್ಲ. ಬಂಡವಾಳಶಾಹಿಗಳ ಹಿತದೃಷ್ಟಿ ಗಮನದಲ್ಲಿಟ್ಟು ಕೇಂದ್ರ ಸರ್ಕಾರ ಆಡಳಿತ ನಡೆಸುತ್ತಿದೆ. ಬೆಲೆ ಏರಿಕೆ ನಿಯಂತ್ರಣ ವಿಚಾರದಲ್ಲಿ ವೈಫಲ್ಯತೆ ಸಾಧಿಸಿರುವುದು ಇದಕ್ಕೆ ಸಾಕ್ಷಿ’ ಎಂದು ಆರೋಪಿಸಿದ್ದಾರೆ.
‘ಯುಪಿಎ ಸರ್ಕಾರದ ಅವಧಿಯಲ್ಲಿ ಒಂದು ರೂಪಾಯಿ ಏರಿಕೆಯಾದರೂ ಬಿಜೆಪಿಯವರು ಬೀದಿಗಿಳಿದು ಪ್ರತಿಭಟಿಸುತ್ತಿದ್ದರು. ಇಷ್ಟೊಂದು ಪ್ರಮಾಣದ ಬೆಲೆಏರಿಕೆ ಬಿಸಿ ತಟ್ಟಿದ್ದರೂ ಅವರೆಲ್ಲ ಈಗ ಎಲ್ಲಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.
‘ಭ್ರಷ್ಟಾಚಾರದ ಆರೋಪ ಹೊತ್ತಿರುವ ಶಶಿಕಲಾ ಜೊಲ್ಲೆ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಮೂಲಕ ಬಿಜೆಪಿ ಸರ್ಕಾರ ಅಸಮರ್ಥತೆ ತೋರಿದೆ. ಇಂತ ಸರ್ಕಾರದಿಂದ ಪಾರದರ್ಶಕ ಆಡಳಿತ ನಿರೀಕ್ಷಿಸುವುದು ಕಷ್ಟ’ ಎಂದು ವ್ಯಂಗ್ಯವಾಡಿದ್ದಾರೆ.