ಶಿರಸಿ: ಕಳೆದ ಒಂದು ವರ್ಷದಿಂದ ಸ್ಥಗಿತಗೊಂಡಿದ್ದ ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರ ಏ.1 ರಿಂದ ಪುನರಾರಂಭಗೊಂಡಿದೆ.
ಇಲ್ಲಿನ ಸಾಂತ್ವನ ಮಹಿಳಾ ವೇದಿಕೆ ಕೇಂದ್ರವನ್ನು ಮುನ್ನಡೆಸಲಿದ್ದು, ಸಹಾಯವಾಣಿ ಕೇಂದ್ರದ ಕಾರ್ಯಚಟುವಟಿಕೆಗೆ ಶುಕ್ರವಾರ ಶಿಶು ಅಭಿವೃದ್ಧಿ ಅಧಿಕಾರಿ ದತ್ತಾತ್ರೇಯ ಭಟ್ ಚಾಲನೆ ನೀಡಿದರು.
‘ಕೌಟುಂಬಿಕ ಕಲಹಗಳು ತುಂಬ ಸೂಕ್ಷ್ಮ. ಅಂತಹ ಸಂದರ್ಭದಲ್ಲಿ ಆ ಸಂಬಂಧಗಳ ಸೂಕ್ಷ್ಮತೆಗೆ ಪೂರಕವಾಗಿ ಸ್ಪಂದಿಸಿ, ಆಪ್ತಸಮಾಲೋಚನೆಗಳ ಮೂಲಕ ಸಂಬಂಧಗಳನ್ನು ಉಳಿಸಿ ನಿಭಾಯಿಸಲು ಸಹಾಯವಾಣಿಯಂತಹ ಕೇಂದ್ರಗಳ ಅಗತ್ಯವಿದೆ’ ಎಂದರು.
ಸಾಂತ್ವನ ಮಹಿಳಾ ವೇದಿಕೆಯ ಅಧ್ಯಕ್ಷೆ ಜ್ಯೋತಿ ಭಟ್ ಮಾತನಾಡಿ, ‘ಮಹಿಳೆಯರ ಸಂಕಟಕ್ಕೆ ಸ್ಪಂದಿಸಲು ಸಹಾಯವಾಣಿ ಕೇಂದ್ರ ಮರಳಿ ಒದಗಿದೆ’ ಎಂದರು.
ವೇದಿಕೆಯ ಕಾರ್ಯದರ್ಶಿ ಶೈಲಜಾ ಗೊರನ್ಮನೆ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಖಜಾಂಚಿ ಮಧುಮತಿ ಹೆಗಡೆ ವಂದನಾರ್ಪಣೆ ಮಾಡಿದರು. ಸಹ ಕಾರ್ಯದರ್ಶಿ ರಾಜಲಕ್ಷ್ಮಿ ಹೆಗಡೆ, ಸದಸ್ಯರಾದ ಪ್ಲಾವಿಯಾ ಜಗದೀಶ್, ಉಷಾ ಶಹಾಣೆ ಇದ್ದರು.