ಶಿರಸಿ: ಯುದ್ಧಪೀಡಿತ ಉಕ್ರೇನ್ ದೇಶದಲ್ಲಿ ಸಿಲುಕಿದ್ದ ತಾಲ್ಲೂಕಿನ ಬನವಾಸಿಯ ಇಮ್ರಾನ್ ನಜಿರ್ ಚೌದರಿ ಶನಿವಾರ ಸಂಜೆ ರೊಮೇನಿಯಾ ಗಡಿ ತಲುಪಿದ್ದು ಅಲ್ಲಿ ಸಿಲುಕಿಕೊಂಡಿದ್ದಾರೆ.
ರಾಜಧಾನಿ ಕೀವ್ ನಗರದಿಂದ 300 ಕಿ.ಮೀ. ದೂರದ ವಿನಿಶಿಯಾ ನಗರದಲ್ಲಿದ್ದರು. ಅಲ್ಲಿಂದ ಇಮ್ರಾನ್ ಹಾಗೂ ಇತರ 30 ಸ್ನೇಹಿತರನ್ನು ಬಸ್ ಮೂಲಕ ರೊಮೇನಿಯಾಕ್ಕೆ ಕಳುಹಿಸುವ ಪ್ರಯತ್ನ ನಡೆದಿದೆ.
‘ಗಡಿಭಾಗದಲ್ಲಿ ಚಳಿ, ಸಂಚಾರ ದಟ್ಟಣೆಯಿಂದ ವಾಹನಗಳು ಸಿಲುಕಿಕೊಂಡಿವೆ ಎಂದು ಇಮ್ರಾನ್ ಮಾಹಿತಿ ನೀಡಿದ್ದಾನೆ’ ಎಂದು ಇಮ್ರಾನ್ ತಂದೆ ಅಲ್ತಾಫ್ ಚೌದರಿ ‘ಪ್ರಜಾವಾಣಿ’ಗೆ ತಿಳಿಸಿದರು.
ಮೊಬೈಲ್ ಚಾರ್ಜ್ ಮಾಡಿಕೊಳ್ಳಲು ಕಷ್ಟವಾಗುತ್ತಿದೆ. ಚಳಿ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಮಗ ತಿಳಿಸಿದ್ದಾಗಿ ಅವರು ಹೇಳಿದ್ದಾರೆ. ಮಾಹಿತಿ ಪಡೆಯಲು ಇಮ್ರಾನ್ ಸಂಪರ್ಕಕ್ಕೆ ಸಿಕ್ಕಿಲ್ಲ.