ಶಿರಸಿ: ‘ಸಭ್ಯ, ಸಂಸ್ಕಾರವಂತ ದಂಪತಿಗಳು ತಮ್ಮ ಮಕ್ಕಳಿಗೆ ಉತ್ತಮ ಮಾರ್ಗದರ್ಶನ ತೋರುತ್ತಾರೆ. ಅಂಥವರಿಂದ ಸಮಾಜಕ್ಕೂ ದೊಡ್ಡ ಕೊಡುಗೆ ಲಭಿಸುತ್ತದೆ’ ಎಂದು ಸೋಂದಾ ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು.
ಇಲ್ಲಿನ ಮಾರಿಕಾಂಬಾ ಕಲ್ಯಾಣ ಮಂಟಪದಲ್ಲಿ ಬುಧವಾರ ಸ್ವರ್ಣವಲ್ಲಿಯ ಗ್ರಾಮಾಭ್ಯುದಯ ಸಂಸ್ಥೆ ಮತ್ತು ಮಾರಿಕಾಂಬಾ ದೇವಸ್ಥಾನದ ವತಿಯಿಂದ ಆಯೋಜಿಸಲಾಗಿದ್ದ ಸರ್ವ ದಂಪತಿಗಳ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಭವಿಷ್ಯದಲ್ಲಿ ಭಾರತದ ನೆಲದಲ್ಲಿ ಹಿಂದೂ ಸಮುದಾಯದವರೇ ಅಲ್ಪಸಂಖ್ಯಾತರಾಗುವ ಆತಂಕ ಎದುರಾಗಿದೆ. ದಂಪತಿಗಳು ಕನಿಷ್ಠ ಮೂರು ಮಕ್ಕಳನ್ನಾದರೂ ಪಡೆಯಬೇಕು. ಹುಟ್ಟುವ ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಬೆಳೆಸಬೇಕು’ ಎಂದು ಸಲಹೆ ನೀಡಿದರು.
‘ಭ್ರೂಣ ಹತ್ಯೆಯಂತಹ ಕೃತ್ಯಕ್ಕೆ ಆಸ್ಪದ ಕೊಡಬಾರದು. ವಿವಾಹ ವಿಚ್ಛೇದನಕ್ಕೆ ಅವಕಾಶ ಕೊಡಬಾರದು. ಭಿನ್ನಾಭಿಪ್ರಾಯಗಳು ತಲೆದೋರದಂತೆ ಸಂಸಾರ ಮುನ್ನಡೆಸಬೇಕು. ಮುಂದಿನ ಸಮಾಜ ಹೇಗಿರಬೇಕು ಎಂದು ನಿರ್ಧರಿಸುವ ಅಧಿಕಾರ ದಂಪತಿಗಳಿಗಿರುತ್ತದೆ’ ಎಂದರು.
ನವ ದಂಪತಿಗಳು, ಹಿಂದೂ ಸಮಾಜದ ವಿವಿಧ ಸಮುದಾಯಗಳ ದಂಪತಿಗಳಿಗೆ ಶಿಕ್ಷಣ, ಸಂಸ್ಕಾರ, ಆರೋಗ್ಯ ಮುಂತಾದ ವಿಷಯಗಳ ಕುರಿತು ಮಾರ್ಗದರ್ಶನ ಗೋಷ್ಠಿಗಳು ನಡೆದವು.
ಶಿಬಿರಕ್ಕೆ ಮಾರಿಕಾಂಬಾ ದೇವಸ್ಥಾನದ ಅಧ್ಯಕ್ಷ ಆರ್.ಜಿ. ನಾಯ್ಕ ಚಾಲನೆ ನೀಡಿದ್ದರು. ದೇವಸ್ಥಾನದ ಧರ್ಮದರ್ಶಿ ಶಿವಾನಂದ ಶೆಟ್ಟಿ, ವತ್ಸಲಾ ಹೆಗಡೆ, ಪ್ರಮುಖರಾದ ವೆಂಕಟೇಶ ಹೆಗಡೆ ನಾರವಿ, ಸಂತೋಷ ಭಟ್ ಇದ್ದರು.