ಕಾರವಾರ: ‘ಬೈತಖೋಲದ ಭೂದೇವಿ ಗುಡ್ಡ ಅಗೆದು ರಸ್ತೆ ನಿರ್ಮಿಸುತ್ತಿರುವ ನೌಕಾದಳದ ಕೆಲಸ ತಡೆಯಲು ಸಾಧ್ಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿರುವುದು ಅವರ ಅಸಹಾಯಕತೆ ಪ್ರದರ್ಶಿಸಿದೆ’ ಎಂದು ಬೈತಖೋಲ ಅಲಿಗದ್ದಾ ನಿವಾಸಿತರ ಸಂಘದ ಅಧ್ಯಕ್ಷ ಪ್ರೀತಮ್ ಮಾಸೂರಕರ್ ಆರೋಪಿಸಿದರು.
‘ನೌಕಾದಳದ ಅವೈಜ್ಞಾನಿಕ ರಸ್ತೆ ಕಾಮಗಾರಿ ನಡೆಸುತ್ತಿರುವುದರಿಂದ ಜನರಿಗೆ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ಸಚಿವರ ಗಮನಕ್ಕೆ ಗುರುವಾರ ತರಲಾಗಿತ್ತು. ನಮ್ಮ ಬೇಡಿಕೆಗೆ ಸ್ಥಳೀಯ ಶಾಸಕರು ಸ್ಪಂದಿಸಲಿಲ್ಲ. ಸಚಿವರು ಜ.26 ರಂದು ಪುನಃ ಸಭೆ ನಡೆಸುವ ಭರವಸೆ ನೀಡಿದ್ದಾರೆ. ಅಷ್ಟರಲ್ಲಿ ರಸ್ತೆ ಕೆಲಸ ಮುಗಿಯುವ ಸಾಧ್ಯತೆ ಇದೆ’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
‘ಜನರ ಮನವಿಗೆ ಜಿಲ್ಲಾಡಳಿತವೂ ನಿರೀಕ್ಷಿತ ರೀತಿ ಸ್ಪಂದನೆ ಕೊಟ್ಟಿಲ್ಲ. ಹೀಗಾಗಿ ದೊಡ್ಡ ಹೋರಾಟ ಅನಿವಾರ್ಯ ಆಗಿದೆ. ನಗರಸಭೆ ಸದಸ್ಯರು ಬೆಂಬಲಿಸುವ ಭರವಸೆ ನೀಡಿದ್ದಾರೆ. ಕಾರವಾರದ ಜನ ಪಕ್ಷಾತೀತವಾಗಿ ಬೆಂಬಲಿಸಬೇಕಾಗಿದೆ’ ಎಂದು ವಿನಂತಿಸಿದರು.
ನಗರಸಭೆ ಸದಸ್ಯರಾದ ರಾಜೇಶ ಮಾಜಾಳಿಕರ್, ಸ್ನೇಹಲ್ ಹರಿಕಂತ್ರ, ಪ್ರಮುಖರಾದ ಮೈಕಲ್, ವಿಲ್ಸನ್ ಫರ್ನಾಂಡಿಸ್, ಛಾಯಾ ಜಾವ್ಕರ್, ಇತರರು ಇದ್ದರು.