ಭಟ್ಕಳ: ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ಮಂಗಳವಾರ ರಾತ್ರಿ ಭೇಟಿ ನೀಡಿ ಪರಿಶೀಲನೆ ನಡೆಸಿದ ರಾಜ್ಯ ಆರೋಗ್ಯ ಸಚಿವ ಡಾ.ಕೆ ಸುಧಾಕರ್, ನಂತರ ಭಟ್ಕಳ ಶಾಸಕ ಸುನೀಲ ನಾಯ್ಕ ಅವರ ಅತಿಥಿ ಗೃಹಕ್ಕೆ ಭೇಟಿ ನೀಡಿ ಅಲ್ಲಿ ಯಕ್ಷಗಾನ ವೀಕ್ಷಿಸಿದರು. ಸ್ವತಃ ಯಕ್ಷಗಾನ ವೇಷಭೂಷಣ ಧರಿಸಿದರು. ನಂತರ ಕಲಾವಿದರ ಜೊತೆ ಹೆಜ್ಜೆ ಹಾಕಿ ಗಮನ ಸೆಳೆದರು.
ಯಕ್ಷಗಾನ ಅಭಿರುಚಿ ಇರುವ ಸಚಿವರ ಬಗ್ಗೆ ಅರಿತಿದ್ದ ಶಾಸಕ ಸುನೀಲ ನಾಯ್ಕ, ಅವರಿಗಾಗಿಯೇ ಯಕ್ಷಗಾನ ಪ್ರಸಂಗ ಏರ್ಪಡಿಸಿದ್ದರು. ಹೊನ್ನಾವರ, ಗುಣವಂತೆ ಭಾಗದ ಆಯ್ದ ಕಲಾವಿದರು 'ಭೀಷ್ಮ ವಿಜಯ' ಎಂಬ ಯಕ್ಷಗಾನ ಪ್ರಸಂಗವನ್ನು ಆಡಿ ತೋಡಿಸಿದರು.
ಬೆಳಿಗ್ಗೆಯಿಂದ ಜಿಲ್ಲೆಯಲ್ಲಿ ಪ್ರವಾಸದಲ್ಲಿದ್ದ ಸಚಿವರು ಪ್ರಯಾಣದಿಂದ ಆಯಾಸಗೊಂಡರೂ ಆಸಕ್ತಿಯಿಂದ ಯಕ್ಷಗಾನ ವೀಕ್ಷಿಸಿದರು. ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕೂಡ ಜೊತೆಗಿದ್ದರು.