ಕಾರವಾರ: ‘ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ 2023–24ನೇ ಸಾಲಿನ ಪ್ರವೇಶಾತಿ ಪ್ರಕ್ರಿಯೆಗೆ ಉತ್ತಮ ಸ್ಪಂದನೆ ಸಿಗುತ್ತಿದ್ದು, ಆ.31ರ ವರೆಗೆ ಪ್ರಕ್ರಿಯೆ ನಡೆಯಲಿದೆ’ ಎಂದು ವಿಶ್ವವಿದ್ಯಾಲಯದ ದೃಶ್ಯ ಮತ್ತು ಶ್ರವಣ ಪ್ರಚಾರ ವಿಭಾಗದ ನಿರ್ದೇಶಕ ಸಿದ್ದೇಗೌಡ ತಿಳಿಸಿದರು.
ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಉತ್ತರ ಕನ್ನಡ ಜಿಲ್ಲೆಯಲ್ಲಿ ಆಯಾ ತಾಲ್ಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಲಿಕಾರ್ಥಿ ಕೇಂದ್ರ ತೆರೆಯಲಾಗಿದೆ. ವಿದ್ಯಾರ್ಥಿಗಳು ಈ ಕೇಂದ್ರಗಳ ಸಹಾಯದೊಂದಿಗೆ ಅಥವಾ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಪ್ರವೇಶಾತಿ ಪಡೆಯಬಹುದು’ ಎಂದರು.
‘ವಿಶ್ವವಿದ್ಯಾಲಯದ ಅಧಿಕೃತ ವೆಬ್ಸೈಟ್ www.ksoumysuru.ac.inನಲ್ಲಿರುವ ವಿಶ್ವವಿದ್ಯಾಲಯದ ಪ್ರವೇಶಾತಿ ಪೋರ್ಟಲ್ ಮೂಲಕ ಆನ್ಲೈನ್ ಅರ್ಜಿ ಸಲ್ಲಿಕೆಗೆ ಅವಕಾವಿದೆ. ವಾಣಿಜ್ಯ, ಕಲೆ, ಮತ್ತು ವಿಜ್ಞಾನ ವಿಭಾಗದ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ ಕೋರ್ಸ್ ಸೇರಿದಂತೆ 15ಕ್ಕೂ ಹೆಚ್ಚು ಪದವಿ ಶಿಕ್ಷಣಕ್ಕೆ ಅವಕಾಶವಿದೆ’ ಎಂದು ವಿವರಿಸಿದರು.
‘ಪ್ರಥಮ ವರ್ಷದ ಪದವಿ ಶಿಕ್ಷಣದ ಬಳಿಕ ಓದು ಮೊಟಕುಗೊಳಿಸಿದ್ದವರು ಲ್ಯಾಟರಲ್ ಎಂಟ್ರಿ ಮೂಲಕ ನೇರವಾಗಿ ದ್ವಿತೀಯ ವರ್ಷದ ಪದವಿಗೆ ಪ್ರವೇಶ ಪಡೆಯುವ ಅವಕಾಶವೂ ಇದೆ. ಬಿಪಿಎಲ್ ಕುಟುಂಬಗಳ ವಿದ್ಯಾರ್ಥಿಗಳಿಗೆ ಪ್ರವೇಶಾತಿ ಶುಲ್ಕದಲ್ಲಿ ರಿಯಾಯಿತಿ ಇದೆ. ಹೆಚ್ಚಿನ ಮಾಹಿತಿಗೆ ಕಾರವಾರದ ಸವಿತಾ ಸರ್ಕಲ್ ಬಳಿಯಲ್ಲಿರುವ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರವನ್ನು (9900667916, 9738014893, 9901247560) ಸಂಪರ್ಕಿಸಬಹುದು’ ಎಂದು ತಿಳಿಸಿದರು.
ವೆಂಕಟೇಶ ಗಿರಿ, ಬಿ.ಎಂ.ಸ್ವಾಮಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.