ಭಟ್ಕಳ: ತಾಲ್ಲೂಕಿನ ಬೈಲೂರಿನ ಗುಡಿಗದ್ದೆ ಕ್ರಾಸ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ವಾಹನಗಳನ್ನು ತಡೆದು ಹಣ, ಚಿನ್ನಾಭರಣ ದೋಚಲು ಯತ್ನಿಸುತ್ತಿದ್ದ ಆರೋಪದಡಿ ಇಬ್ಬರು ಆರೋಪಿಗಳನ್ನು ಶನಿವಾರ ರಾತ್ರಿ ಮುರುಡೇಶ್ವರ ಪೊಲೀಸರು ಬಂಧಿಸಿದ್ದು, ಮೂವರು ಆರೋಪಿಗಳು ಪರಾರಿಯಾಗಿದ್ದಾರೆ.
ಮಹಾರಾಷ್ಟ್ರದ ಪುಣೆ ನಿವಾಸಿಗಳಾದ ರಾಜೇಶ ಗಣೇಶ ಜಾದವ (23) ಹಾಗೂ ಅರ್ಜುನ್ ಹೀರಾಮನ್ ಸುಕ್ಕಿ (19) ಬಂಧಿತರು.
ರಾಷ್ಟ್ರೀಯ ಹೆದ್ದಾರಿಯಲ್ಲಿ ಕಬ್ಬಿಣದ ರಾಡ್ ಹಾಗೂ ಖಾರದಪುಡಿ,ಇತರ ದರೋಡೆಗೆ ಬಳಸುವ ವಸ್ತುಗಳನ್ನು ಹಿಡಿದು ವಾಹನಗಳನ್ನು ಅಡ್ಡಗಟ್ಟುತ್ತಿದ್ದರು ಎಂದು ಸ್ಥಳೀಯರು ಪೊಲೀಸರಿದೆ ದೂರಿದ್ದರು. ಎಸ್ಐ ದೇವರಾಜ ಬಿರಾದಾರ ನೇತೃತ್ವದ ತಂಡ ಕಾರ್ಯಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ.
'ಮಹಾರಾಷ್ಟ್ರದಿಂದ ಬಂದಿರುವ ದೊಡ್ಡ ಗುಂಪೊಂದು ಮುರುಡೇಶ್ವರಲ್ಲಿ ಬೀಡುಬಿಟ್ಟಿದೆ. ಚಾಲಾಕಿತನದಿಂದ ಕಳ್ಳತನ ಮಾಡಿ ನುಣಚಿಕೊಳ್ಳುತ್ತಿದ್ದಾರೆ' ಎಂದು ಸ್ಥಳೀಯರು ದೂರಿದ್ದಾರೆ.
ಎರಡು ದಿನಗಳ ಹಿಂದೆ ಮುರುಡೇಶ್ವರ ಜಾತ್ರೆ ವೇಳೆ ಸರಗಳ್ಳತನ ಮಾಡಿ ಇಬ್ಬರು ಕಳ್ಳರು ಸಿಕ್ಕಿಬಿದ್ದಿದ್ದರು. ಶನಿವಾರ ವಾಹನ ದರೋಡೆ ಮಾಡುವಾಗ ಮತ್ತಿಬ್ಬರು ಸಿಕ್ಕಿಬಿದ್ದಿದ್ದಾರೆ.