ಶಿರಸಿ: ತಾಲ್ಲೂಕಿನ ಜಡ್ಡಿಗದ್ದೆ ಹಾಲು ಉತ್ಪಾದಕರ ಸಹಕಾರಿ ಸಂಘದ ಮೂವರು ಸದಸ್ಯರ ಜಾನುವಾರು ಮರಣ ಹೊಂದಿದ ಹಿನ್ನೆಲೆಯಲ್ಲಿ ಪರಿಹಾರ ಚೆಕ್ ಅನ್ನು ಸೋಮವಾರ ಧಾರವಾಡ ಹಾಲು ಒಕ್ಕೂಟದ ಪರವಾಗಿ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ವಿತರಿಸಿದರು.
ಜಡ್ಡಿಗದ್ದೆ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರಾದ ಹರಿಹರ ಭಟ್, ಮಹಾಬಲೇಶ್ವರ ಭಟ್ ಹಾಗೂ ಗಣಪತಿ ಚಲವಾದಿ ಇವರ ಆಕಳುಗಳು ಮರಣ ಹೊಂದಿದ ಕಾರಣ ತಲಾ ₹ 40 ಸಾವಿರ, ₹ 30 ಸಾವಿರ ಹಾಗೂ ₹ 30 ಸಾವಿರ ಮೊತ್ತದ ಚೆಕ್ಗಳನ್ನು ಮೃತ ಜಾನುವಾರುಗಳ ಫಲಾನುಭವಿಗಳಿಗೆ ಜಡ್ಡಿಗದ್ದೆ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ವಿತರಿಸಿ ಅವರು ಮಾತನಾಡಿದರು.
ಈಗಾಗಲೇ ಆಕಸ್ಮಿಕವಾಗಿ ಮರಣ ಹೊಂದಿದ ರಾಸುಗಳ ಮಾಲೀಕರಿಗೆ ವಿಮಾ ಹಣವನ್ನು ವಿತರಿಸಲಾಗಿದೆ. ವಿಮಾ ಹಣವನ್ನು ಪಡೆದ ರಾಸುಗಳ ಮಾಲೀಕರು ಆ ವಿಮಾ ಹಣದ ಮೂಲಕ ಇನ್ನೊಂದು ಆಕಳನ್ನು ಖರೀದಿಸಿ ಇನ್ನೂ ಹೆಚ್ಚಿನ ಹಾಲಿನ ಉತ್ಪಾದನೆ ಮಾಡಬೇಕು ಎಂದರು.
ಬೇಡಿಕೆಗೆ ಅನುಗುಣವಾಗಿ ಹಾಲಿನ ಶೇಖರಣೆ ಆಗದೇ ಇರುವುದರಿಂದ ಮಾರುಕಟ್ಟೆಯ ಬೇಡಿಕೆ ಎಷ್ಟಿದೆಯೋ ಅಷ್ಟೇ ಪ್ರಮಾಣದಲ್ಲಿ ಹಾಲನ್ನು ಪೂರೈಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ಕಾರಣ ಹೈನುಗಾರಿಕೆಯಿಂದ ವಿಮುಖರಾಗದೇ ಜಾನುವಾರು ವಿಮಾ ಯೋಜನೆಯಿಂದ ದೊರಕಿದ ಹಣದಲ್ಲಿ ಮತ್ತೊಂದು ಆಕಳನ್ನು ಖರೀದಿಸಿ ಇನ್ನೂ ಹೆಚ್ಚಿನ ಹಾಲಿನ ಉತ್ಪಾದನೆ ಮಾಡುವಂತಾಗಬೇಕು ಎಂದು ಈ ಮೂಲಕ ಅವರು ವಿನಂತಿಸಿದರು. ಎಲ್ಲ ಜಾನುವಾರುಗಳಿಗೆ ವಿಮೆಯನ್ನು ಮಾಡಿಸಬೇಕು ಎಂದರು.
ವಿಸ್ತರಣಾಧಿಕಾರಿ ಮೌನೇಶ ಸೋನಾರ, ವಿಸ್ತರಣಾ ಸಮಾಲೋಚಕರಾದ ಅಭಿಷೇಕ ನಾಯ್ಕ, ಜಯಂತ ಪಟಗಾರ, ಜಡ್ಡಿಗದ್ದೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ವಿನಾಯಕ ಹೆಗಡೆ ಮುಖ್ಯಕಾರ್ಯನಿರ್ವಾಹಕ ವಿನಾಯಕ ಹೆಗಡೆ ಉಪಸ್ಥಿತರಿದ್ದರು.