ಶಿರಸಿ: ‘ಉತ್ತರ ಕನ್ನಡ ಜಿಲ್ಲೆಗೆ ವಿಶ್ವವಿದ್ಯಾಲಯ ಬೇಕು ಎಂಬ ಬೇಡಿಕೆ ಇದೆ. ಜಿಲ್ಲೆಯ ಶೈಕ್ಷಣಿಕ ಕೇಂದ್ರವಾಗಿರುವ ಶಿರಸಿಯಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆದಿದ್ದು ಶೀಘ್ರ ಅದು ಕೈಗೂಡುವ ವಿಶ್ವಾಸವಿದೆ’ ಎಂದುವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಇಲ್ಲಿನ ಎಸ್.ವಿ.ನೀಲೆಕಣಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ ₹1.92 ಕೋಟಿ ವೆಚ್ಚದಲ್ಲಿ ಕೈಗೊಂಡ ಸಭಾಂಗಣ, ಪ್ರಯೋಗಾಲಯ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ಶಿರಸಿಯಲ್ಲಿ ಅರಣ್ಯ, ತೋಟಗಾರಿಕೆ, ಹಲವು ಪದವಿ ಕಾಲೇಜುಗಳಿವೆ. ಶೈಕ್ಷಣಿಕ ಕ್ಷೇತ್ರ ಬಲಪಡಿಸುವ ನಿಟ್ಟಿನಲ್ಲಿ ಇಲ್ಲಿಯೇ ವಿಶ್ವವಿದ್ಯಾಲಯ ಸ್ಥಾಪನೆ ಸೂಕ್ತ ಎಂಬ ಅಭಿಪ್ರಾಯವಿದೆ’ ಎಂದರು.
‘ಉತ್ತಮ ಫಲಿತಾಂಶದ ಮೂಲಕ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರಗತಿ ತೋರಿಸಬೇಕು. ಶಿಕ್ಷಣ ಪಡೆದು ಸಾಧನೆ ಮಾಡುವುದು ವಿದ್ಯಾರ್ಥಿಗಳ ಆದ್ಯತೆಯಾಗಬೇಕು’ ಎಂದರು. ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ ಅಧ್ಯಕ್ಷತೆ ವಹಿಸಿದ್ದರು.
ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ನಂದನ ಸಾಗರ್, ನಗರಸಭೆ ಉಪಾಧ್ಯಕ್ಷೆ ವೀಣಾ ಶೆಟ್ಟಿ, ಸದಸ್ಯ ಯಶವಂತ ನೀಲೆಕಣಿ, ನಾಮನಿರ್ದೇಶಿತ ಸದಸ್ಯ ಸುರೇಂದ್ರ ಬೈಂದೂರ, ಜಯದೇವ ನೀಲೆಕಣಿ, ಸತೀಶ ಧಾರೇಶ್ವರ, ರಾಜು ಹೆಗಡೆ ಇದ್ದರು. ಪ್ರಾಚಾರ್ಯ ನರೇಂದ್ರ ನಾಯಕ ಸ್ವಾಗತಿಸಿದರು.