ಹೊಸಪೇಟೆ(ವಿಜಯನಗರ): ‘ಕೊರೊನಾ ಮೊದಲ ಅಲೆ ಸಮಯದಲ್ಲಿ ವಿರೋಧ ಪಕ್ಷಗಳು ಲಸಿಕೆಯ ವಿರುದ್ಧ ಅಪಪ್ರಚಾರ ನಡೆಸಿದ್ದರೂ ನೂರು ಕೋಟಿ ಡೋಸ್ ಕೋವಿಡ್ ಲಸಿಕಾಕರಣ ಯಶಸ್ವಿಯಾಗಿದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ ತಿಳಿಸಿದರು.
ನೂರು ಕೋಟಿ ಕೋವಿಡ್ ಲಸಿಕೆ ನೀಡಿದ ಪ್ರಯುಕ್ತ ಕೊರೊನಾ ಸೇನಾನಿಗಳಿಗೆ ಶುಕ್ರವಾರ ನಗರ ಬಿಜೆಪಿ ಕಚೇರಿಯಲ್ಲಿ ಸನ್ಮಾನಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
‘ದೇಶದಲ್ಲಿ ನೂರು ಕೋಟಿ ಕೋವಿಡ್ ಡೋಸ್ ಲಸಿಕೆ ನೀಡಲಾಗಿದೆ. ಅಷ್ಟೇ ಅಲ್ಲ, ಪ್ರಪಂಚದ 95ಕ್ಕೂ ಅಧಿಕ ರಾಷ್ಟ್ರಗಳಿಗೆ ಲಸಿಕೆ ಪೂರೈಸಿದ ಹೆಗ್ಗಳಿಕೆ ಭಾರತದ್ದು. ಕೋವಿಡ್ ಲಸಿಕೆ ಬಗ್ಗೆ ವಿರೋಧ ಪಕ್ಷಗಳು ಸಾಕಷ್ಟು ಅಪಪ್ರಚಾರ ನಡೆಸಿದ್ದವು. ಆದರೆ, ಸರ್ಕಾರ ಯಶಸ್ವಿಯಾಗಿ ತನ್ನ ಕೆಲಸ ನಿರ್ವಹಿಸಿದೆ. ಜನ ಸರ್ಕಾರದ ಮೇಲೆ ವಿಶ್ವಾಸ ತೋರಿಸಿದರು’ ಎಂದರು.
‘ವಿರೋಧ ಪಕ್ಷಗಳ ಸಹಕಾರ ಇಲ್ಲದಿದ್ದರೂ ವಿಜ್ಞಾನಿಗಳಿಗೆ ಸಹಕಾರ ನೀಡಿದ ಪ್ರಧಾನ ಮಂತ್ರಿಗಳು ಸ್ವದೇಶಿ ಲಸಿಕೆಯನ್ನು ನೀಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಪಕ್ಷದ ಕಾರ್ಯಕರ್ತರು ಸಹ ಲಸಿಕೆ ಪಡೆಯುವಂತೆ ಜಿಲ್ಲೆಯಾದ್ಯಂತ ಪ್ರಚಾರ ಮಾಡಿದ್ದಾರೆ’ ಎಂದು ಹೇಳಿದರು.
ಕೋವಿಡ್ ಲಸಿಕಾಕರಣ ಯಶಸ್ವಿಗೊಳಿಸಿದ ಮುಂಚೂಣಿ ಸೇನಾನಿಗಳಾದ ವೈದ್ಯರು, ದಾದಿಯರು, ಆಶಾ ಕಾರ್ಯಕರ್ತೆಯರು, ಪೌರ ಕಾರ್ಮಿಕರು ಹಾಗೂ ಪೊಲೀಸರನ್ನು ಜಿಲ್ಲೆಯಾದ್ಯಂತ ಪಕ್ಷದ ಕಾರ್ಯಕರ್ತರು ಸನ್ಮಾನಿಸಲಿದ್ದಾರೆ ಎಂದರು.
ಬಿಜೆಪಿ ಮಂಡಲ ಅಧ್ಯಕ್ಷ ಬಸವರಾಜ ನಾಲತ್ವಾಡ, ನಗರ ಘಟಕದ ಅಧ್ಯಕ್ಷ ಕಾಸಟ್ಟಿ ಉಮಾಪತಿ, ಜೀವರತ್ನಂ, ರಾಘು, ನಾಗರಾಜ್ ಮತ್ತು ಚೈತ್ರ ಇದ್ದರು.