ದಾವಣಗೆರೆ: ಕಡಿಮೆ ಬೆಲೆಗೆ ಚಪ್ಪಲಿ ಕೊಡಿಸುವುದಾಗಿ ನಂಬಿಸಿ ಕೇರಳದ ವ್ಯಾಪಾರಿಯಿಂದ ಹಣ ದೋಚಿದ್ದ 5 ಜನರನ್ನು ಪೋಲಿಸರು ಬಂಧಿಸಿದ್ದಾರೆ.
ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಯಲ್ಲಾಪುರದ ಪ್ರವೀಣ್ ಅಲಿಯಾಸ್ ಪಿ.ಕೆ., ದೇವಣ್ಣ ಅಲಿಯಾಸ್ ಡುಮ್ಮ, ಸುಭಾಷ್ ಅಲಿಯಾಸ್ ಸುಬ್ಬು, ವೀರೇಶ ಹಾಗೂ ದಾವಣಗೆರೆ ಕೆಟಿಜೆ ನಗರದ ಎಲ್.ಸಂಜಯ್ ಅಲಿಯಾಸ್ ಸಂಜು ಬಂಧಿತರು.
ಮತ್ತೊಬ್ಬ ಪ್ರಮುಖ ಆರೋಪಿ ರಫೀಕ್ ಎಂಬಾತನು ತಲೆಮರೆಸಿಕೊಂಡಿದ್ದಾನೆ.
ಕೇರಳದ ವೈನಾಡ್ ಜಿಲ್ಲೆಯ ಚಪ್ಪಲಿ ವ್ಯಾಪಾರಿ ಸಿ.ಆರ್. ರಾಶೀಕ್ ಹಾಗೂ ಇವರ ಸ್ನೇಹಿತರಾದ ಅಭಿನೋಶನ್ ಹಾಗೂ ನಿಜಾಮುದ್ದೀನ್ ಅವರಿಗೆ ಕಡಿಮೆ ಬೆಲೆ ಚಪ್ಪಲಿ ಕೊಡಿಸುವುದಾಗಿ ನಂಬಿಸಿದ ಆರೋಪಿಗಳು ದಾವಣಗೆರೆ ಹೊರವಲಯದ ಬಾಡ ಕ್ರಾಸ್ ಬಳಿ ಕರೆಸಿಕೊಂಡು ಹಲ್ಲೆ ನಡೆಸಿ ಅವರಿಂದ 57ಸಾವಿರ ನಗದು, ಮೂರು ಮೊಬೈಲ್ ಹಾಗೂ ದಾಖಲೆಗಳು ಇದ್ದ ಬ್ಯಾಗ್ ಅನ್ನು ಕಿತ್ತುಕೊಂಡು ಪರಾರಿಯಾಗಿದ್ದರು.
ನಗರ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ನೇತೃತ್ವದಲ್ಲಿ ಆರೋಪಿಗಳ ಪತ್ತೆಗೆ ತಂಡ ರಚಿಸಲಾಗಿತ್ತು. ವಿದ್ಯಾನಗರ ಠಾಣೆಯ ಪೊಲೀಸ್ ಇನ್ ಸ್ಪೆಕ್ಟರ್ ಪ್ರಭಾವತಿ ಸಿ.ಶೇತಸನದಿ ಹಾಗೂ ಸಂಚಾರಿ ವೃತ್ತದ ಪಿಐ ಆರ್.ಪಿ.ಅನಿಲ್ ಹಾಗೂ ತಂಡ ದಾಳಿ ನಡೆಸಿ ಆರೋಪಿಗಳಿಂದ ₹10 ಸಾವಿರ ನಗದು ಎರಡು ಮೊಬೈಲ್ ಗಳು ಹಾಗೂ ಒಂದು ಬುಲೆಟ್ ಬೈಕ್ ಅನ್ನು ವಶಪಡಿಸಿಕೊಂಡಿದೆ.
ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.