ವಿಜಯನಗರ (ಹೊಸಪೇಟೆ): ತಾಲ್ಲೂಕಿನ ಮಲಪನಗುಡಿ ಸುತ್ತಮುತ್ತಲಿನ ಆಲೆಮನೆಗಳಿಗೆ ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ ಅವರು ಗುರುವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಬ್ಬಿನ ಗಾಣಗಳಲ್ಲಿ ‘ಸಕ್ಕರೆ ಬೆರೆಸಿ ಬೆಲ್ಲ ತಯಾರಿಸಲಾಗುತ್ತಿದೆ’ ಎಂದು ಈ ಹಿಂದೆ ‘ಪ್ರಜಾವಾಣಿ’ ವರದಿ ಮಾಡಿತ್ತು. ಈ ಕುರಿತು ಸಾರ್ವಜನಿಕರು ಕೂಡ ದೂರು ಸಲ್ಲಿಸಿದ್ದರು. ನಂತರ ತಹಶೀಲ್ದಾರ್ ಎಚ್. ವಿಶ್ವನಾಥ್ ನೇತೃತ್ವದ ತಂಡ ದಾಳಿ ನಡೆಸಿ, ಸಕ್ಕರೆ, ರಸಾಯನಿಕಗಳನ್ನು ವಶಪಡಿಸಿಕೊಂಡಿತ್ತು.
ಮತ್ತೆ ದೂರುಗಳು ಬಂದದ್ದರಿಂದ ಉಪವಿಭಾಗಾಧಿಕಾರಿಯವರು 14 ಕಬ್ಬಿನ ಗಾಣಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಅನುಮಾನ ಬಂದ ಗಾಣಗಳಿಂದ ಸ್ಯಾಂಪಲ್ ಸಂಗ್ರಹಿಸಿ, ಪ್ರಯೋಗಾಲಯಕ್ಕೆ ಕಳಿಸಿದ್ದಾರೆ.
‘ಯಾರು ಕೂಡ ಬೆಲ್ಲಕ್ಕೆ ಸಕ್ಕರೆ ಬೆರೆಸದಂತೆ ಸೂಚಿಸಲಾಗಿದೆ. ಅನುಮಾನ ಬಂದ ಸ್ಯಾಂಪಲ್ಗಳನ್ನು ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ವರದಿ ಬಂದ ನಂತರ ಕ್ರಮ ಜರುಗಿಸಲಾಗುವುದು’ ಎಂದು ಸಿದ್ದರಾಮೇಶ್ವರ ತಿಳಿಸಿದ್ದಾರೆ.
ಆಹಾರ ಇಲಾಖೆಯ ಇನ್ಸ್ಪೆಕ್ಟರ್ ಎಚ್. ನಾಗರಾಜ್, ಆಹಾರ ಸುರಕ್ಷತಾ ಅಧಿಕಾರಿ ಉಮೇಶ್ ಇದ್ದರು.