ಹೊಸಪೇಟೆ (ವಿಜಯನಗರ): ನಟ ದಿವಂಗತ ಪುನೀತ್ ರಾಜಕುಮಾರ್ ಪುತ್ಥಳಿ ಅನಾವರಣ ಸಮಾರಂಭ ಕಣ್ತುಂಬಿಕೊಳ್ಳಲು ಜನಸಾಗರವೇ ಇಲ್ಲಿನ ಪುನೀತ್ ವೃತ್ತಕ್ಕೆ ಹರಿದು ಬಂದಿದ್ದು, ಜನರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಬೀಸಿದರು.
ಸಂಜೆ ಐದು ಗಂಟೆಗೆ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ, ಕಳೆದ ಎರಡೂವರೆ ಗಂಟೆಗಳಿಂದ ರಸಮಂಜರಿ ಕಾರ್ಯಕ್ರಮ ನಡೆಯುತ್ತಿದೆ. ಇನ್ನಷ್ಟೇ ಪುತ್ಥಳಿ ಅನಾವರಣಗೊಳ್ಳಬೇಕಿದೆ.
ವಿವಿಧ ಕಡೆಗಳಿಂದ ಜನ ಬಂದಿದ್ದು ಕಾರ್ಯಕ್ರಮದ ಸ್ಥಳದಲ್ಲಿ ಕುಣಿದು ಕುಪ್ಪಳಿಸುತ್ತಿದ್ದಾರೆ. ಬ್ಯಾರಿಕೇಡ್ ದಾಟಿಕೊಂಡು ಗಣ್ಯರ ಗ್ಯಾಲರಿಗೆ ನುಗ್ಗಿದ್ದಾರೆ. ಇದನ್ನು ಕಂಡು ಪೊಲೀಸರು ಲಾಠಿ ಬೀಸಿದರು. ಸುತ್ತಮುತ್ತಲಿನ ಕಟ್ಟಡ, ಮರಗಳನ್ನೇರಿ ಜನ ಕುಳಿತು ಕಾರ್ಯಕ್ರಮ ವೀಕ್ಷಿಸುತ್ತಿದ್ದಾರೆ.
ಅಪಾರ ಸಂಖ್ಯೆಯ ಜನರಿದ್ದು, ಪೊಲೀಸರ ಸಂಖ್ಯೆ ಕಡಿಮೆಯಿದ್ದು, ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.