ಕೂಡ್ಲಿಗಿ (ವಿಜಯನಗರ ಜಿಲ್ಲೆ): ಬಿಜೆಪಿ ಅಭ್ಯರ್ಥಿ ಲೋಕೇಶ್ ವಿ. ನಾಯಕ ಪರ ಚಿತ್ರನಟ ಸುದೀಪ್ ಅವರು ಪಟ್ಟಣದಲ್ಲಿ ಗುರುವಾರ ರೋಡ್ ಶೋ ನಡೆಸಿದರು.
ಸಂಡೂರಿನಿಂದ ಕಾರಿನಲ್ಲಿ ಬಂದ ಸುದೀಪ್, ಪಟ್ಟಣದ ರಾಮಲಿಂಗೇಶ್ವರ ದೇವಸ್ಥಾನದ ಬಳಿ ತೆರೆದ ವಾಹನ ಏರಿ ನೆರಿದಿದ್ದ ಜನರತ್ತ ಕೈ ಮಾಡುತ್ತ ಪಕ್ಕದಲ್ಲಿ ನಿಂತಿದ್ದ ಬಿಜೆಪಿ ಅಭ್ಯರ್ಥಿ ಲೋಕೇಶ್ ವಿ. ನಾಯಕ ಅವರ ಕೈ ಮೇಲೆತ್ತಿ ಜನರಿಗೆ ತೋರಿಸಿ ಮತಯಾಚಿಸಿದರು. ಜನ ಕಿಚ್ಚ ಕಿಚ್ಚ ಎಂಬ ಕೂಗಿದರು. ಕೊತ್ತಲಾಂಜನೇಯ ಸ್ವಾಮಿ ದೇವಸ್ಥಾನದ ಎದುರಿನಿಂದ ಮದಕರಿ ನಾಯಕ ವೃತ್ತದ ವರೆಗೆ ರೋಡ್ ಶೋ ನಡೆಸಿದರು. ಸುದೀಪ್ ಮಾತಾಡಬಹುದು ಎಂದು ಜನ ನಿರೀಕ್ಷಿಸಿದ್ದರು. ಆದರೆ, ಅವರು ರೋಡ್ ಶೋ ನಂತರ ಕಾರು ಹತ್ತಿ ನಿರ್ಗಮಿಸಿದ್ದರಿಂದ ಜನ ಸಪ್ಪೆ ಮೊರೆ ಹಾಕಿ ತೆರಳಿದರು.
ಬಿಜೆಪಿ ಚುನಾವಣಾ ಉಸ್ತುವಾರಿ ವೀರೇಶ್ ಬಾತಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ.ಎಂ. ತಿಪ್ಪೇಸ್ವಾಮಿ, ಪ್ರಧಾನ ಕಾರ್ಯದರ್ಶಿ ಸೂರ್ಯಪಾಪಣ್ಣ, ಮಂಡಲ ಅಧ್ಯಕ್ಷ ಕೆ. ಚನ್ನಪ್ಪ,ಕಾರ್ಯದರ್ಶಿ ಪಿ. ಮಂಜುನಾಥ, ಮುಖಂಡರಾದ ಗುಳಿಗಿ ವೀರೇಂದ್ರ ಇದ್ದರು.