ಹೊಸಪೇಟೆ (ವಿಜಯನಗರ): ಮೂರು ತಿಂಗಳ ಬಾಕಿ ಗೌರವ ಧನ ಪಾವತಿಸುವಂತೆ ಆಗ್ರಹಿಸಿ ರಾಜ್ಯ ಅಂಗನವಾಡಿ ನೌಕರರ ಸಂಘದವರು (ಸಿಐಟಿಯು ಸಂಯೋಜಿತ) ಶುಕ್ರವಾರ ನಗರದ ಸಿಡಿಪಿಒ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ನಂತರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ವೀರನಗೌಡ ಅವರಿಗೆ ಮನವಿಪತ್ರ ಸಲ್ಲಿಸಿದರು.
ಸಂಘದ ಅಧ್ಯಕ್ಷೆ ಕೆ.ನಾಗರತ್ನಮ್ಮ ಮಾತನಾಡಿ, ಅಂಗನವಾಡಿ ನೌಕರರಿಗೆ ಮೂರು ತಿಂಗಳಿಂದ ವೇತನ ಪಾವತಿಯಾಗಿಲ್ಲ. ಜಿಲ್ಲೆಯ ಬಹುತೇಕ ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಬಾಡಿಗೆ ಸಹ ಸಂದಾಯವಾಗಿಲ್ಲ. ಕೆಲವೊಮ್ಮೆ ಕಾರ್ಯಕರ್ತೆಯರು ಸ್ವಂತ ಕೈಯಿಂದ ವೆಚ್ಚ ಭರಿಸಿದ್ದಾರೆ ಎಂದರು.
ಬಾಕಿಯಿರುವ 3 ತಿಂಗಳ ಗೌರವಧನ, ಮೊಟ್ಟೆ ವೆಚ್ಚ, ಬಾಡಿಗೆ ವೆಚ್ಚ ಕೂಡಲೇ ಭರಿಸಬೇಕು, ಗ್ರಾಮೀಣ ಭಾಗಗಳಲ್ಲಿ ಶಿಥಿಲಗೊಂಡಿರುವ ಅಂಗನವಾಡಿ ಕೇಂದ್ರಗಳ ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಖಜಾಂಚಿ ಈರಮ್ಮ, ಕಾರ್ಯದರ್ಶಿ ಕೆ.ಎಂ.ಸ್ವಪ್ನ, ಸಕ್ರಮ್ಮ, ಅಂಜಲಿ ಬೆಳಗಲ್, ಸುನೀತಾ, ಶಕುಂತಲಾ ಇದ್ದರು.