ನಗರದ ರಾಣಿಪೇಟೆಯ ನಿವಾಸಿ, ಆಟೊ ಚಾಲಕ ಹೊನ್ನೂರಪ್ಪ ಅವರೇ ಪ್ರಾಮಾಣಿಕತೆ ಮೆರೆದು, ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಕೆಎಲ್ಎಸ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಎನ್. ಚಮಂತಿ ಅವರು ಸಂಕ್ಲಾಪುರದಿಂದ ಹೊನ್ನೂರಪ್ಪ ಅವರ ಆಟೊದಲ್ಲಿ ಬರುವಾಗ ಮರೆತು ಲ್ಯಾಪ್ಟಾಪ್ ಅಲ್ಲಿಯೇ ಬಿಟ್ಟು ಹೋಗಿದ್ದಾರೆ. ಬಳಿಕ ಲ್ಯಾಪ್ಟಾಪ್ ಕಳೆದು ಹೋದುದರ ಬಗ್ಗೆ ಪಟ್ಟಣ ಠಾಣೆಗೆ ಹೋಗಿ ದೂರು ಸಲ್ಲಿಸಿದ್ದಾರೆ. ಹೊನ್ನೂರಪ್ಪ ಅವರು ಕೆಲಸ ಮುಗಿಸಿಕೊಂಡು ಮನೆಗೆ ಹಿಂತಿರುಗಿದಾಗ ಆಟೊದಲ್ಲಿ ಲ್ಯಾಪ್ಟಾಪ್ ಇರುವುದನ್ನು ಗಮನಿಸಿದ್ದಾರೆ. ತಕ್ಷಣವೇ ಅವರ ಮಗ ಮನೋಹರ್ ಜತೆಗೂಡಿ ಠಾಣೆಗೆ ಬಂದಿದ್ದಾರೆ. ನಂತರ ಪೊಲೀಸರು ಚಮಂತಿ ಅವರನ್ನು ಕರೆಸಿ, ಹೊನ್ನೂರಪ್ಪ ಅವರಿಂದಲೇ ಸೋಮವಾರ ಲ್ಯಾಪ್ಟಾಪ್, ಅದರ ಬ್ಯಾಗ್ ಹಿಂತಿರುಗಿಸಿದ್ದಾರೆ.