ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಫೋಟ ಸಾಮಾನ್ಯ ಅಪಘಾತ ಎಂದಿದ್ದ ಡಿಕೆಶಿ ತಾಲಿಬಾನ್ ಬೆಂಬಲಿಗರೇ? –ಪ್ರಲ್ಹಾದ ಜೋಶಿ

Last Updated 6 ಮಾರ್ಚ್ 2023, 10:55 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ಕುಕ್ಕರ್‌ ಬಾಂಬ್‌ ಸ್ಫೋಟವನ್ನು ನಾವೇ ಮಾಡಿದ್ದೇವೆ ಎಂದು ಐಎಸ್‌ಐಎಸ್‌ ಸಂಘಟನೆಯವರು ಹೇಳಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರೇ ಈಗ ಐಎಸ್‌ಐಎಸ್‌ಗೆ ಸಪೋರ್ಟ್‌ ಮಾಡ್ತಿರಾ? ತಾಲಿಬಾನ್‌ಗೆ ಸಪೋರ್ಟ್‌ ಮಾಡ್ತಿರಾ? ಅಥವಾ ರಾಜ್ಯದ ಕ್ಷಮೆ ಕೇಳ್ತಿರಾ ಎನ್ನುವುದನ್ನು ತಿಳಿಸಬೇಕು’ ಎಂದು ಕೇಂದ್ರ ಗಣಿ, ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಲ್ಹಾದ ಜೋಶಿ ಆಗ್ರಹಿಸಿದರು.

ನಗರದಲ್ಲಿ ಸೋಮವಾರ ಏರ್ಪಡಿಸಿದ್ದ ವಿಜಯನಗರ ಜಿಲ್ಲಾಮಟ್ಟದ ಫಲಾನುಭವಿಗಳ ಸಮ್ಮೇಳನದಲ್ಲಿ ಭಾಗವಹಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕುಕ್ಕರ್‌ ಬಾಂಬ್‌ ಸ್ಫೋಟ ಅದೊಂದು ಸಾಮಾನ್ಯ ಅಪಘಾತ. ಜನರ ಗಮನ ಬೇರೆಡೆ ಸೆಳೆಯಲು ಬಿಜೆಪಿಯವರು ಈ ರೀತಿ ಮಾಡಿದ್ದಾರೆ ಎಂದು ಶಿವಕುಮಾರ್‌ ಎರಡು ತಿಂಗಳ ಹಿಂದೆ ಹೇಳಿದ್ದರು. ಇವರೇನು ಐಎಸ್‌ಐಎಸ್‌ ಬೆಂಬಲಿಗರಾ? ತಾಲಿಬಾನ್‌ ಬೆಂಬಲಿಗರಾ? ನೀವು ಜನರ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ನೀವು ಐಎಸ್‌ಐಎಸ್‌, ತಾಲಿಬಾನ್‌ ಜೊತೆಗೆ ಇರುವವರು ಎನ್ನುವುದು ಜನ ತೀರ್ಮಾನಿಸುತ್ತಾರೆ. ಶಿವಕುಮಾರ್‌ ನೀವು ಕ್ಷಮೆ ಕೇಳಿದರೆ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಇದ್ದೀರಿ ಎಂದರ್ಥ. ಇಲ್ಲದಿದ್ದರೆ ಭಯೋತ್ಪಾದಕರ ಪರ ಇದ್ದೀರಿ ಎಂದರ್ಥ ಎಂದು ಹೇಳಿದರು.

ಇದು ತುಷ್ಟೀಕರಣದ ರಾಜಕಾರಣ. ಹಲವು ವರ್ಷಗಳಿಂದ ಕಾಂಗ್ರೆಸ್‌ ಹಾಗೂ ಅದರ ಮಿತ್ರ ಪಕ್ಷಗಳು ಮಾಡುತ್ತ ಬಂದಿವೆ. ಜಗತ್ತಿನಲ್ಲಿ ಪಾಕಿಸ್ತಾನ ಪ್ರಾಯೋಜಿತ ಸ್ಫೋಟ, ಭಯೋತ್ಪಾದನೆ ನಡೆಯುತ್ತಿದೆ. ಅದನ್ನು ಏಕಾಂಗಿ ಮಾಡಿ, ಪಾಕಿಸ್ತಾನವನ್ನು ಬೂದು ಪಟ್ಟಿಗೆ ಸೇರಿಸಲು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತ ಶ್ರಮಿಸುತ್ತಿದೆ. ಹೀಗಿರುವಾಗ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರು ಭಾರತದ ಹಿತಾಸಕ್ತಿಗೆ ವಿರುದ್ಧವಾಗಿ ಕೇಂಬ್ರಿಜ್‌ ವಿಶ್ವವಿದ್ಯಾಲಯದಲ್ಲಿ ಮಾತನಾಡುತ್ತಾರೆ. ಡಿ.ಕೆ. ಶಿವಕುಮಾರ್‌ ಅವರು ಸಾಮಾನ್ಯ ಸ್ಫೋಟವೆಂಬಂತೆ ಮಾತನಾಡುತ್ತಾರೆ ಎಂದರು.

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ ಒಂದು ಸ್ಥಾನ ಗೆದ್ದಿಲ್ಲ. ಇತ್ತೀಚೆಗೆ ನಡೆದ ಈಶಾನ್ಯ ರಾಜ್ಯಗಳಲ್ಲೂ ತೊಳೆದು ಹೋಗಿದ್ದಾರೆ. ಎಲ್ಲೂ ಅಡ್ರೆಸ್‌ ಇಲ್ಲದಂತಾದರೂ ತುಷ್ಟೀಕರಣದ ರಾಜಕಾರಣ ಬಿಟ್ಟಿಲ್ಲ. ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಪುತ್ರ ಸರ್ಕಾರಿ ಅಧಿಕಾರಿ. ಲೋಕಾಯುಕ್ತ ತನಿಖೆಯಲ್ಲಿ ನಾವು ಯಾವುದೇ ಹಸ್ತಕ್ಷೇಪ ಮಾಡುತ್ತಿಲ್ಲ. ಭವಿಷ್ಯದಲ್ಲಿ ಮತ್ತೊಬ್ಬರು ಈ ರೀತಿ ಮಾಡಬಾರದು ಎಂದು ಲೋಕಾಯುಕ್ತವನ್ನು ಆಗ್ರಹಿಸಿದ್ದೇವೆ. ಭ್ರಷ್ಟಾಚಾರ ತಡೆಯಲು ಲೋಕಾಯುಕ್ತಕ್ಕೆ ಸ್ವತಂತ್ರ ಅಧಿಕಾರ ಕೊಟ್ಟಿದ್ದೇವೆ. ಕಾಂಗ್ರೆಸ್‌ನವರು ಇದನ್ನು ದುರ್ಬಲಗೊಳಿಸಿದ್ದರು. ಹಲ್ಲಿಲ್ಲದ ಹುಲಿ ಎಸಿಬಿ ತಂದಿದ್ದೇ ಕಾಂಗ್ರೆಸ್‌. ಐದು ವರ್ಷ ಭ್ರಷ್ಟಾಚಾರದಿಂದ ಸರ್ಕಾರ ನಡೆಸಿದ್ದರು. ಭ್ರಷ್ಟಾಚಾರದ ಮೊಟ್ಟೆಗಳನ್ನು ಇಟ್ಟು ಪೋಷಿಸಿ, ನೂರಾರು ಮರಿಗಳನ್ನು ಇಟ್ಟು ಅವು ರಕ್ತಬೀಜಾಸುರಗಳಂತೆ ಬೆಳೆಸಿದ್ದೇ ಕಾಂಗ್ರೆಸ್‌ ಎಂದು ಆರೋಪಿಸಿದರು.

ಬೆಳಗಾವಿಯಲ್ಲಿ ಮುಖ್ಯಮಂತ್ರಿಯವರು ಶಿವಾಜಿ ಮಹಾರಾಜರ ಪ್ರತಿಮೆ ಉದ್ಘಾಟನೆ ಮಾಡಿದ ನಂತರ ಮತ್ತೊಮ್ಮೆ ಮಾಡಿರುವುದು ದುರಹಂಕಾರ ತೋರಿಸುತ್ತದೆ. ಅದಕ್ಕೆ ದುಡ್ಡು ಕೊಟ್ಟಿದ್ದು ನಮ್ಮ ಸರ್ಕಾರ. ಕಾಂಗ್ರೆಸ್ಸಿಗರಿಗೆ ಪ್ರಜಾಪ್ರಭುತ್ವದಲ್ಲಿ ವಿಶ್ವಾಸವಿಲ್ಲ ಎನ್ನುವುದನ್ನು ತೋರಿಸುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT