ಹೊಸಪೇಟೆ (ವಿಜಯನಗರ): ನಗರಸಭೆ ಚುನಾವಣೆಗೆ ಇನ್ನೊಂದೇ ವಾರ ಬಾಕಿ ಉಳಿದಿದ್ದು, ಕಣದಲ್ಲಿರುವ ಅಭ್ಯರ್ಥಿಗಳು ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ.
ಆಯಾ ವಾರ್ಡ್ಗಳಲ್ಲಿ ಅಭ್ಯರ್ಥಿಗಳು ಕಾರ್ಯಕರ್ತರೊಂದಿಗೆ ಮನೆ ಮನೆಗೆ ತೆರಳಿ ಮತ ಯಾಚಿಸುತ್ತಿದ್ದಾರೆ. ಬೆಂಬಲಿಗರು ಘೋಷಣೆ ಕೂಗುವ ಮೂಲಕ ಮತದಾರರ ಗಮನ ಸೆಳೆಯುವ ಕಸರತ್ತು ನಡೆಸುತ್ತಿದ್ದಾರೆ. ಬೆಳಿಗ್ಗೆ ಹಾಗೂ ಸಂಜೆ ವೇಳೆಯಲ್ಲಿ ಪ್ರಚಾರಕ್ಕೆ ಹೆಚ್ಚಿನ ಒತ್ತು ಕೊಡುತ್ತಿದ್ದಾರೆ. ಮಧ್ಯಾಹ್ನ ಬಹುತೇಕರು ಮನೆಯಲ್ಲಿರುವುದಿಲ್ಲ. ಬೆಳಿಗ್ಗೆ ಕೆಲಸಕ್ಕೆ ಹೋಗುವ ಮುಂಚೆ, ಕೆಲಸದ ಅವಧಿ ಮುಗಿದ ನಂತರ ಸಂಜೆ ಎಲ್ಲರೂ ಮನೆಯಲ್ಲಿ ಸಿಗುತ್ತಾರೆ ಎಂದು ಭಾವಿಸಿ ಆ ವೇಳೆಗೆ ಹೆಚ್ಚಿನ ಸಮಯ ಮೀಸಲಿಟ್ಟಿದ್ದಾರೆ.
ಪ್ರಚಾರದಲ್ಲಿ ಯಾವ ಪಕ್ಷವೂ ಹಿಂದೆ ಬಿದ್ದಿಲ್ಲ. ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ಗೆ ಸೆಡ್ಡು ಹೊಡೆಯುವಂತೆ ಸಿಪಿಎಂ, ಜೆಡಿಎಸ್, ಕೆಆರ್ಎಸ್, ಎಸ್ಡಿಪಿಐ, ಎಎಪಿ ಸೇರಿದಂತೆ ಪಕ್ಷೇತರ ಅಭ್ಯರ್ಥಿಗಳು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.