ಹೊಸಪೇಟೆ (ವಿಜಯನಗರ): ಕಾಂಗ್ರೆಸ್ ಸೇವಾ ದಳದ ಕಾರ್ಯಕರ್ತರು ಭಾನುವಾರ ನಗರದಲ್ಲಿ ರಾಷ್ಟ್ರ ಧ್ವಜಗಳೊಂದಿಗೆ ಪಾದಯಾತ್ರೆ ನಡೆಸಿದರು.
ಕಾಂಗ್ರೆಸ್ನಿಂದ ಪ್ರತಿ ತಿಂಗಳ ಕೊನೆಯ ಭಾನುವಾರ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ತ್ರಿವರ್ಣ ಧ್ವಜಗಳೊಂದಿಗೆ ನಗರದಲ್ಲಿ ಪಾದಯಾತ್ರೆ ನಡೆಸುತ್ತಿದ್ದು, ಅದರ ಭಾಗವಾಗಿ ಈ ಭಾನುವಾರವೂ ಕಾರ್ಯಕ್ರಮ ಜರುಗಿತು.
ಬಳ್ಳಾರಿ ಜಿಲ್ಲಾ ಗ್ರಾಮೀಣ ಸೇವಾದಳ ಸಮಿತಿ ಜಿಲ್ಲಾಧ್ಯಕ್ಷ ಬಿ ಮಾರಣ್ಣ ಧ್ವಜಾರೋಹಣ ಮಾಡಿದರು. ಎನ್.ಸಿ. ಕಾಲೊನಿ ಬಳಿ ಪಂಡಿತ್ ಜವಾಹರಲಾಲ್ ನೆಹರೂ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಅನಂತರ ಪ್ರಮುಖ ಮಾರ್ಗಗಳ ಮೂಲಕ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ವರೆಗೆ ಹೆಜ್ಜೆ ಹಾಕಿದರು.
ಹೊಸಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿನಾಯಕ ಶೆಟ್ಟರ್ ಮಾತನಾಡಿ, ಸೇವಾದಳ ಸಂಘಟನೆಯು ಕಾಂಗ್ರೆಸ್ ಪಕ್ಷಕ್ಕೆ ಶಿಸ್ತು ಮತ್ತು ನಿಷ್ಠೆಯನ್ನು ಕಲಿಸಿ ಪಕ್ಷಕ್ಕೆ ಬೆನ್ನೆಲುಬಾಗಿದೆ. ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ಮುಖ್ಯ ಪಾತ್ರ ವಹಿಸುತ್ತಿರುವುದು ಸೇವಾದಳ ಸಂಘಟನೆ ಎಂದರು.
ಮುಖಂಡರಾದ ರಾಜಶೇಖರ್ ಹಿಟ್ನಾಳ್, ಸೋಮಶೇಖರ್ ಬಣ್ಣದಮನೆ, ಗುಜ್ಜಲ್ ನಿಂಗಣ್ಣ ನಾಯಕ, ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಯೋಗಲಕ್ಷ್ಮಿ, ಇಂಟೆಕ್ ಅಧ್ಯಕ್ಷ ಎಚ್. ಬಿ. ಶ್ರೀನಿವಾಸ್, ಯುವ ಕಾಂಗ್ರೆಸ್ ಅಧ್ಯಕ್ಷ ಭರತ್ ಕುಮಾರ್ ಸಿ. ಆರ್, ರಾಧ, ಕವಿತಾ, ಅನಿತಾ, ತಾಯಪ್ಪ, ಅಮೀನಾ ಇತರರಿದ್ದರು.