ಜ. 27ರಿಂದ 29ರ ವರೆಗೆ ಮೂರು ದಿನ ಉತ್ಸವ ನಡೆಯಲಿದ್ದು, ಧ್ವನಿ ಮತ್ತು ಬೆಳಕಿನ ವೈಭವದಲ್ಲಿ ಮಿಂದೇಳಲು ಹಂಪಿ ಸಜ್ಜುಗೊಂಡಿದೆ. ವಿಜಯನಗರ ಸಾಮ್ರಾಜ್ಯದ ವೈಭವ, ದೇಶದ ಕಲೆ, ಸಂಸ್ಕೃತಿ, ಅದರ ಹಿರಿಮೆ, ವಿವಿಧತೆ ಉತ್ಸವದಲ್ಲಿ ಅನಾವರಣಗೊಳ್ಳಲಿದೆ. ಸ್ಥಳೀಯರು ಸೇರಿದಂತೆ ಸ್ಯಾಂಡಲ್ವುಡ್, ಬಾಲಿವುಡ್ ಕಲಾವಿದರು ದೇಶದ ಶ್ರೀಮಂತ ಸಂಸ್ಕೃತಿಯನ್ನು ಪರಿಚಯಿಸುವುದರ ಜೊತೆಗೆ ಜನರನ್ನು ಮನರಂಜಿಸುವ ಕೆಲಸ ಮಾಡಲಿದ್ದಾರೆ. ಇಷ್ಟೇ ಅಲ್ಲ, ಅಕ್ಷರ ಜ್ಞಾನವನ್ನು ಶ್ರೀಮಂತಗೊಳಿಸಿದ ಲೇಖಕರು ತಮ್ಮ ಮಾತುಗಳ ಮೂಲಕ ದೇಶದ ಇತಿಹಾಸ, ವರ್ತಮಾನ ಹಾಗೂ ಭವಿತವ್ಯದ ಮೇಲೆ ಬೆಳಕು ಚೆಲ್ಲುವರು. ಇನ್ನು, ಕವಿಗಳಿಂದ ಕವನ ಧಾರೆಯೂ ಹರಿಯಲಿದೆ. ಶಿಲ್ಪ ಹಾಗೂ ಚಿತ್ರ ಕಲಾವಿದರ ಕೈಗಳಿಂದ ಅತ್ಯುತ್ತಮ ಕಲಾಕೃತಿಗಳು ಮೂಡಿಬರಲಿವೆ. ಮರಳಿನಲ್ಲೂ ಕಲೆ ಅನಾವರಣಗೊಳ್ಳಲಿದೆ.