ಹೊಸಪೇಟೆ (ವಿಜಯನಗರ): ಎಲ್ಲ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ತಿಂಗಳಿಗೆ ಕನಿಷ್ಠ ₹8,000ದಂತೆ ಮುಂದಿನ ಆರು ತಿಂಗಳವರೆಗೆ ಪರಿಹಾರ ನೀಡಬೇಕೆಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ಜಿಲ್ಲಾ ಸಮಿತಿ ಆಗ್ರಹಿಸಿದೆ.
ಈ ಸಂಬಂಧ ಗುರುವಾರ ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ ಅವರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಸಮಿತಿ ಮುಖಂಡರು ಒತ್ತಾಯಿಸಿದ್ದಾರೆ.
‘ಕೋವಿಡ್ ಲಾಕ್ಡೌನ್ನಿಂದ ಲಕ್ಷಾಂತರ ಕಟ್ಟಡ ನಿರ್ಮಾಣ ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ. ಮುಂದಿನ ಮೂರು ತಿಂಗಳ ವರೆಗೆ ಕೋವಿಡ್ ಎರಡನೇ ಅಲೆಯ ಅಪಾಯವಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಮಳೆಗಾಲ ಆರಂಭಗೊಂಡಿರುವುದರಿಂದ ನಿರ್ಮಾಣ ಚಟುವಟಿಕೆಗಳು ಹೆಚ್ಚಾಗಿ ನಡೆಯುವುದಿಲ್ಲ. ಅವರಿಗೆ ಮೇ ತಿಂಗಳಿಂದ ಜಾರಿಗೆ ಬರುವಂತೆ ಆರು ತಿಂಗಳು ಮಾಸಿಕ ₹8,000 ಪರಿಹಾರ ನೀಡಬೇಕು’ ಎಂದು ಆಗ್ರಹಿಸಿದ್ದಾರೆ.
‘ಹೋದ ವರ್ಷ ಘೋಷಿಸಿದ ₹5,000 ಪರಿಹಾರ ಕೂಡ ಅವರ ಖಾತೆಗೆ ಹಾಕಬೇಕು. ಶಿಕ್ಷಣ, ಪಿಂಚಣಿ, ಮದುವೆ, ವೈದ್ಯಕೀಯ ಸೇರಿದಂತೆ ಇತರೆ ಧನ ಸಹಾಯಕ್ಕಾಗಿ ಕರೆದ ಅರ್ಜಿಗಳ ಅವಧಿ ವಿಸ್ತರಿಸಬೇಕು. ಅಂತರರಾಜ್ಯ ಪ್ರಯಾಣ ಮಾಡುವ ಕಾರ್ಮಿಕರಿಗೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು’ ಎಂದು ಹಕ್ಕೊತ್ತಾಯ ಮಾಡಿದ್ದಾರೆ.
ಸಂಘದ ಜಿಲ್ಲಾ ಅಧ್ಯಕ್ಷ ಎನ್. ಯಲ್ಲಾಲಿಂಗ, ತಾಲ್ಲೂಕು ಅಧ್ಯಕ್ಷ ಎಂ. ಗೋಪಾಲ್, ಕಾರ್ಯದರ್ಶಿ ಕೆ. ರಾಮಾಂಜಿನಿ, ಖಜಾಂಚಿ ಬೀಯಮ್ಮ ಇದ್ದರು.