ಹೊಸಪೇಟೆ (ವಿಜಯನಗರ): ನಗರದ ವಾಣಿಜ್ಯ ಮಳಿಗೆ ಹಾಗೂ ರಸ್ತೆ ವಿಭಜಕಗಳಲ್ಲಿರುವ ಕನ್ನಡೇತರ ನಾಮಫಲಕಗಳನ್ನು ತೆರವುಗೊಳಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿದೆ.
ಈ ಸಂಬಂಧ ಮಂಗಳವಾರ ನಗರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಿದ ವೇದಿಕೆಯ ಕಾರ್ಯಕರ್ತರು ಪೌರಾಯುಕ್ತ ಮನ್ಸೂರ್ ಅಲಿ ಅವರಿಗೆ ಮನವಿ ಸಲ್ಲಿಸಿ ಸೂಕ್ತ ಕ್ರಮ ಕೈಗೊಳ್ಳಲು ಆಗ್ರಹಿಸಿದರು.
ನಗರದ ವಿವಿಧ ಭಾಗಗಳಲ್ಲಿ ಕನ್ನಡೇತರ ಫಲಕ, ಜಾಹೀರಾತು ಹಾವಳಿ ಹೆಚ್ಚಾಗಿದೆ. ಆದಷ್ಟು ಶೀಘ್ರ ನಗರಸಭೆ ತೆರವುಗೊಳಿಸದಿದ್ದಲ್ಲಿ ಸಂಘಟನೆಯಿಂದ ಫಲಕಗಳಿಗೆ ಮಸಿ ಬಳಿಯಲಾಗುತ್ತದೆ ಎಂದು ಎಚ್ಚರಿಸಿದರು.
ಸಂಘಟನೆಯ ಜಿಲ್ಲಾ ಅಧ್ಯಕ್ಷ ತಾರಿಹಳ್ಳಿ ಹನುಮಂತಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಎಚ್.ಶ್ರೀನಿವಾಸ್, ಎಸ್.ಎಂ.ಜಾಫರ್, ಗುಜ್ಜಲ ಲಿಂಗಣ್ಣ ನಾಯಕ ಇದ್ದರು.