ಹೊಸಪೇಟೆ (ವಿಜಯನಗರ): ‘ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಗುಣಮಟ್ಟದ ಶಿಕ್ಷಣ, ಉದ್ಯೋಗ ಕೊಡಿಸುವುದರಲ್ಲಿ ಸಂಪೂರ್ಣ ವಿಫಲವಾಗಿವೆ’ ಎಂದು ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ರಾಜ್ಯ ಘಟಕದ ಅಧ್ಯಕ್ಷ ಅಮರೇಶ ಕಡಗದ ಹೇಳಿದರು.
ನಗರದ ಶ್ರಮಿಕ ಭವನದಲ್ಲಿ ಬುಧವಾರ ಸಂಘಟನೆಯ ಅಖಿಲ ಭಾರತ ಸಮ್ಮೇಳನದ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದರು.
ಸರ್ಕಾರ ವಿದ್ಯಾರ್ಥಿ ವಿರೋಧಿ ನೀತಿಗಳನ್ನು ಜಾರಿಗೆ ತರುತ್ತಿದೆ. ಹೊಸ ಶಿಕ್ಷಣ ನೀತಿ ಅರಾಜಕತೆ ಸೃಷ್ಟಿಸಿದೆ. ಪದವಿ ಪರೀಕ್ಷೆ ಬರೆದು ಒಂದು ವರ್ಷವಾದರೂ ಪ್ರಥಮ, ದ್ವಿತೀಯ ಸೆಮಿಸ್ಟರ್ ಫಲಿತಾಂಶ ಪ್ರಕಟಿಸಿಲ್ಲ. ದಾಖಲಾತಿ, ಪರೀಕ್ಷಾ ಶುಲ್ಕ ಹೆಚ್ಚಿಸಿರುವುದರಿಂದ ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಹೊರೆ ಬಿದ್ದಿದೆ ಎಂದರು.
ಎಸ್ಎಫ್ಐ ಸಂಘಟನೆಯ 17ನೇ ರಾಷ್ಟ್ರೀಯ ಸಮ್ಮೇಳನ ತೆಲಂಗಾಣ ರಾಜ್ಯದ ಹೈದರಾಬಾದ್ ನಲ್ಲಿ ಡಿಸೆಂಬರ್ 13 ರಿಂದ 16ರ ವರೆಗೆ ನಡೆಯಲಿದೆ. ಎಲ್ಲರಿಗೂ ಶಿಕ್ಷಣ, ಎಲ್ಲರಿಗೂ ಉದ್ಯೋಗ, ಎಲ್ಲರೂ ಒಂದು ಎಂಬ ಪ್ರಮುಖ ಘೋಷಣೆಯಡಿ ಸಮ್ಮೇಳನ ನಡೆಯಲಿದೆ ಎಂದು ಹೇಳಿದರು.
ಸಂಘಟನೆಯ ರಾಜ್ಯ ಸಮಿತಿ ಸದಸ್ಯರಾದ ಬಸವರಾಜ, ಶಿವರಡ್ಡಿ, ಪವನ್, ಮಾರೇಶ, ಅನಿಲ್ ತಿಪ್ಪಮ್ಮ ಇತರರಿದ್ದರು.