ಹೊಸಪೇಟೆ (ವಿಜಯನಗರ): ವಿಜಯನಗರ ಜಿಲ್ಲೆಯಲ್ಲಿ ಗಣೇಶೋತ್ಸವ ಶಾಂತಿಯುತವಾಗಿ ನಡೆಯುತ್ತಿದ್ದು, ಜನರು ಭಕ್ತಿಭಾವದಿಂದ ಗಣೇಶನ ಸ್ತುತಿ ಮಾಡುತ್ತಿದ್ದಾರೆ. ಬರಗಾಲದ ಛಾಯೆ ಇದ್ದರೂ, ಸಂಭ್ರಮಕ್ಕೆ ಅಡ್ಡಿ ಉಂಟಾಗಿಲ್ಲ.
‘ಜಿಲ್ಲೆಯಲ್ಲಿ ಒಟ್ಟು 1,560 ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಸ್ಥಾಪಿಸುವುದಕ್ಕೆ ಅನುಮತಿ ಪಡೆಯಲಾಗಿದೆ. ಕೆಲವೆಡೆ ಮೊದಲ ದಿನ, ಕೆಲವೆಡೆ ಮೂರನೇ ದಿನ ಹಾಗೂ ಇನ್ನು ಕೆಲವು ಕಡೆಗಳಲ್ಲಿ ಐದನೇ ದಿನ ಗಣೇಶ ವಿಸರ್ಜನೆ ನಡೆಯಲಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಶ್ರೀಹರಿಬಾಬು ಬಿ.ಎಲ್. ತಿಳಿಸಿದರು.
ಹೊಸಪೇಟೆಯಲ್ಲಿ ಕಾಂತಾರ ಗಣಪತಿ, ಶೇಂಗಾ ಗಣೇಶ, ವಡಕರಾಯ ದೇವಸ್ಥಾನದಲ್ಲಿ ಮುದ್ದು ಗಣಪ, ಬಳ್ಳಾರಿ ರಸ್ತೆಯಲ್ಲಿ ಸುಮಾರು 12 ಅಡಿ ಎತ್ತರದ ಗಣಪತಿ ಸಹಿತ ವಿವಿಧ ಆಕಾರ, ಶೈಲಿಯ ಗಣಪತಿ ವಿಗ್ರಹಗಳು ಗಮನ ಸೆಳೆದವು. ವಡಕರಾಯ ದೇವಸ್ಥಾನದಲ್ಲಿ 1008 ಮೋದಕ ಆಹುತಿಯೊಂದಿಗೆ ಗಣಪತಿ ಹವನ, ಕೆಲವೆಡೆ ಅನ್ನದಾನಗಳು ನಡೆದವು.
ಹೊಸಪೇಟೆಯ ಹೆಚ್ಚಿನ ಮನೆಗಳಲ್ಲಿ ಸೋಮವಾರವೇ ಚೌತಿ ಆಚರಣೆ ನಡೆದರೆ, ಸಾರ್ವಜನಿಕ ಗಣೇಶ ವಿಗ್ರಹಗಳನ್ನು ಸಹ ಸೋಮವಾರವೇ ಕೂರಿಸಲಾಯಿತು. ಉತ್ತರ ಭಾರತದಿಂದ ಬಂದು ನೆಲೆಸಿದವರು ಮಂಗಳವಾರ ಗಣೇಶ ಚೌತಿ ಆಚರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.