ಹೊಸಪೇಟೆ (ವಿಜಯನಗರ): ‘ನುಡಿಹಬ್ಬ’ದ ಪ್ರಯುಕ್ತ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕ್ಯಾಂಪಸ್ನಲ್ಲಿ ಹಾಕಿರುವ ಬ್ಯಾನರ್ಗಳಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರ ಹೆಸರಿನೊಂದಿಗೆ ಹಾಕಿದ್ದ ಉಪಮುಖ್ಯಮಂತ್ರಿ ಎಂಬ ಪದನಾಮದ ಮೇಲೆ ಮಂಗಳವಾರ ಟೇಪ್ ಅಂಟಿಸಿ ಮರೆ ಮಾಚಲಾಯಿತು.
ಅಶ್ವತ್ಥನಾರಾಯಣ ಅವರು ಸದ್ಯ ಉನ್ನತ ಶಿಕ್ಷಣ ಸಚಿವರಷ್ಟೇ ಇದ್ದಾರೆ. ಆದರೆ, ಎಲ್ಲಾ ಬ್ಯಾನರ್, ಫ್ಲೆಕ್ಸ್ಗಳ ಮೇಲೆ ಉಪಮುಖ್ಯಮಂತ್ರಿ ಎಂದು ಬರೆಸಲಾಗಿತ್ತು. ಈ ಕುರಿತು ಮಂಗಳವಾರ ‘ಪ್ರಜಾವಾಣಿ’ಯಲ್ಲಿ ’ಅಶ್ವತ್ಥನಾರಾಯಣ ಈಗಲೂ ಡಿಸಿಎಂ’ ಎಂದು ಸುದ್ದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತುಕೊಂಡ ವಿ.ವಿ. ಆಡಳಿತವು ಉಪಮುಖ್ಯಮಂತ್ರಿ ಸಾಲಿನ ಮೇಲೆ ಟೇಪ್ ಅಂಟಿಸಿ, ಮುಜುಗರದಿಂದ ಪಾರಾಗಿದೆ.
ಕನ್ನಡ ವಿ.ವಿ.ಯಲ್ಲಿ ಬ್ಯಾನರ್ ಹಾಕುವ ಸಂಸ್ಕೃತಿಯೇ ಇಲ್ಲ. ಈ ಹಿಂದೆ ಮಹೇಶ್ ಜೋಶಿ ಅವರಿಗೆ ನಾಡೋಜ ಘೋಷಿಸಿದ್ದಾಗ ಅವರು ಎಲ್ಲೆಡೆ ಬ್ಯಾನರ್, ಫ್ಲೆಕ್ಸ್ ಹಾಕಿಸಿಕೊಂಡಿದ್ದರು. ಬಳಿಕ ಅದನ್ನು ವಿ.ವಿ. ಆಡಳಿತವೇ ತೆಗೆಸಿತ್ತು. ಈಗ ಸ್ವತಃ ಆಡಳಿತವೇ ಬ್ಯಾನರ್ ಹಾಕಿಸಿರುವ ಕ್ರಮಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಆದರೆ, ಅದನ್ನು ತೆರವುಗೊಳಿಸಿಲ್ಲ. ಓಲೈಕೆ ದೃಷ್ಟಿಯಿಂದ ಹೆಚ್ಚಿನ ಪ್ರಮಾಣದಲ್ಲಿ ಬ್ಯಾನರ್ ಹಾಕಿಸಲಾಗಿದೆ ಎಂಬ ಆರೋಪ ಕೇಳಿ ಬಂದಿವೆ.